ರಾಯಚೂರು: ನಗರದ ಕೋಟ್ ತಲಾರ್ ಬಡಾವಣೆಯ ಮೋತಿ ಮಸೀದಿ ಬಳಿಯಲ್ಲಿ ಒಂದು ಬಹು ಮಹಡಿಯ ಕಟ್ಟಡ ಪಕ್ಕದ ಮತ್ತೊಂದು ಕಟ್ಟಡದ ಮೇಲೆ ವಾಲಿದ್ದು, ಮನೆಯಲ್ಲಿದ್ದವರನ್ನು ಖಾಲಿ ಮಾಡಿಸಲಾಗಿದೆ.
ಕಟ್ಟಡದ ಅಡಿಪಾತದಲ್ಲಿ ಚರಂಡಿ ನೀರು ನುಗ್ಗಿದ ಪರಿಣಾಮ ನಾಲ್ಕು ಅಂತಸ್ತಿನ ಕಟ್ಟಡವೊಂದು ಪಕ್ಕದ ಕಟ್ಟಡದ ಮೇಲೆ ಬಾಗಿದೆ ಎನ್ನಲಾಗಿದೆ. ಮಹ್ಮದ್ ದಸ್ತಗಿರಿ ಸೇರಿದ ಕಟ್ಟಡ ಮಹ್ಮದ್ ಸಿರಾಜ್ ಎಂಬುವರಿಗೆ ಸೇರಿದ ಮನೆ ಮೇಲೆ ವಾಲಿದೆ.
ಮನೆಯ ಮಾಲೀಕ ದಸ್ತಗಿರಿ ಖುದ್ದು ಸಿವಿಲ್ ಎಂಜಿನಿಯರ್ ಆಗಿದ್ದು, ಕಳೆದ 14 ವರ್ಷಗಳ ಹಿಂದೆ ಮನೆ ನಿರ್ಮಿಸಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಅವರು ಮನೆಯನ್ನು ಬಾಡಿಗೆ ನೀಡಿದ್ದರು. ಘಟನೆ ಬೆನ್ನಲ್ಲೇ ಮಾಲೀಕರನ್ನು ಕರೆಯಿಸಿ ವಿಚಾರಣೆ ಮಾಡಲಾಗಿದೆ. ಸ್ಥಳಕ್ಕೆ ಪಾಲಿಕೆ ಪ್ರಭಾರ ಮೇಯರ್ ಸಾಜೀದ್ ಸಮೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
‘ಜೆಸಿಬಿ ಮೂಲಕ ಮೇಲ್ಮಹಡಿ ತೆರವುಗೊಳಿಸಿ, ಬುನಾದಿ ದುರಸ್ತಿ ಮಾಡಲು ತೀರ್ಮಾನಕ್ಕೆ ಬರಲಾಗಿದೆ. ಇದರೊಟ್ಟಿಗೆ ಪಾಲಿಕೆ ಎಂಜಿನಿಯರ್ ಅವರಿಂದ ಪರಿಶೀಲನೆ ಮಾಡಿ ಸುಗಮವಾಗಿ ಚರಂಡಿ ನೀರು ಸಾಗಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಪ್ರಭಾರ ಮೇಯರ್ ತಿಳಿಸಿದ್ದಾರೆ.
ಚರಂಡಿ ಬ್ಲಾಕ್ ಆದ ಕಾರಣ ನೀರು ಬುನಾದಿಯೊಳಗೆ ನುಗ್ಗಿದ ಪರಿಣಾಮ ಈ ಘಟನೆ ಜರುಗಿದೆ ಎಂದು ಕಟ್ಟಡದ ಮಾಲಿಕರು ಆರೋಪ ಮಾಡಿದ್ದಾರೆ. ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸಿಸುತ್ತಿದ್ದು, ಕೆಳ ಮಹಡಿಯಲ್ಲಿ ವಾಣಿಜ್ಯ ಮಳಿಗೆಗಳು ಇವೆ. ಮುಂಜಾಗ್ರತಾ ಕ್ರಮವಾಗಿ ಮನೆ ಖಾಲಿ ಮಾಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.