ಸಿಂಧನೂರು: ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷರಾಗಿ ಅಮರೇಗೌಡ ನಕ್ಕುಂದಿ ಮಾನ್ವಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ತುಂಗಾಭದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ, ಕ್ರಮಬದ್ಧವಾಗಿರುವುದನ್ನು ಪರಿಶೀಲಿಸಿದ ಸಹಕಾರಿ ಇಲಾಖೆಯ ರಿಟರ್ನಿಂಗ್ ಅಧಿಕಾರಿ ಹಿರೋಜಿ ಅವರು ಅಧ್ಯಕ್ಷರಾಗಿ ಎಂ.ದೊಡ್ಡಬಸವರಾಜ ಹಾಗೂ ಉಪಾಧ್ಯಕ್ಷರಾಗಿ ಅಮರೇಗೌಡ ನಕ್ಕುಂದಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ಆದೇಶ ಪತ್ರ ನೀಡಿದರು.
ಆಡಳಿತ ಮಂಡಳಿ ನಿರ್ದೇಶಕರಾಗಿ ಶರಣೇಗೌಡ ಗದ್ರಟಗಿ, ಎಂ.ಪದ್ಮ ನಾಯ್ಡು, ನಲ್ಲಾ ವೆಂಕಟೇಶ್ವರರಾವ್, ಗುಂಡಪ್ಪ ಬಳಿಗಾರ, ಮಲ್ಲಿಕಾರ್ಜುನ, ಗ್ಯಾನಪ್ಪ ಕನ್ನಾಪೇಟೆ, ರಾಜಶೇಖರ ಬಿ, ಬಸನಗೌಡ ಪೊ.ಪಾ, ಅಂದಾನಪ್ಪ ಮಸ್ಕಿ, ಕುಮಾರಪ್ಪ ಲಿಂಗಸುಗೂರು, ಬಸವರಾಜ ಮುದಗಲ್, ಬಸವರಾಜ ಪಾಟೀಲ್, ನಾಗರತ್ನಮ್ಮ ಮಾನ್ವಿ, ಮಲ್ಲನಗೌಡ ಮಾನ್ವಿ, ಕುಂಟ್ನಾಳ ವೆಂಕಟೇಶ ನಿರ್ದೇಶಕರಾಗಿ ಆಯ್ಕೆಗೊಂಡರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಒಕ್ಕೂಟದ ನೂತನ ಅಧ್ಯಕ್ಷ ಎಂ.ದೊಡ್ಡಬಸವರಾಜ, ಉಪಾಧ್ಯಕ್ಷ ಅಮರೇಗೌಡ ನಕ್ಕುಂದಿ ಅವರನ್ನು ನಿರ್ದೇಶಕರು ಸನ್ಮಾನಿಸಿದರು. ತುಂಗಾಭದ್ರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶಾಖಾ ಮುಖ್ಯನಿರ್ವಾಹಕ ಹನುಮಂತಪ್ಪ, ವ್ಯವಸ್ಥಾಪಕರಾದ ಹುಸೇನಸಾಬ, ಮೈಲಾರಪ್ಪ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.