
ರಾಯಚೂರು: ಸರ್ಕಾರಿ ಶಾಲೆಗಳಲ್ಲಿ ತರಕಾರಿ, ಬಾಳೆ ಹಣ್ಣು ಮತ್ತು ಮೊಟ್ಟೆಗಳ ಸರಬರಾಜು ಸ್ವ-ಸಹಾಯ ಗುಂಪುಗಳಿಗೆ ನೀಡುವುದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈಗಾಗಲೇ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ನೌಕರರು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅಡುಗೆಯವರು ಮಧ್ಯಾಹ್ನದ ಅಡುಗೆಗೆ ಬೇಕಾದ ತರಕಾರಿ, ಬಾಳೆ ಹಣ್ಣು ಮತ್ತು ಮೊಟ್ಟೆಗಳನ್ನು ಶಾಲಾ ಮುಖ್ಯೋಪಾಧ್ಯಾಯರ ಅನುಮತಿ ಮತ್ತು ಸಹಕಾರದೊಂದಿಗೆ ದಿನವಹಿ ಹಾಜರಾತಿ ಪ್ರಕಾರ ತಾವೇ ಖರೀದಿಸಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ತರಕಾರಿ, ಬಾಳೆ ಹಣ್ಣು ಮತ್ತು ಮೊಟ್ಟೆಗಳ ಸರಬರಾಜನ್ನು ಸ್ವ-ಸಹಾಯ ಗುಂಪುಗಳಿಗೆ ಕೊಡುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ಷರ ದಾಸೋಹ ನೌಕರರು ಮೊದಲಿನಿಂದಲೂ ತಮ್ಮ ಹಣದಿಂದಲೇ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಿ ನಂತರ ಎಸ್ಡಿಎಂಸಿ ಖಾತೆಯಿಂದ ಹಣ ಪಡೆಯುತ್ತಾರೆ. ಈ ವ್ಯವಸ್ಥೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮೊದಲಿನಿಂದಲೂ ಇದೆ. ಆದರೆ ಬಿಸಿಯೂಟ ನೌಕರರ ಸಾಮರ್ಥ್ಯ ಮತ್ತು ಅವರ ಕಾಳಜಿಯನ್ನು ಪರಿಗಣಿಸಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮೀ ದೇವಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಮ್ಮ ಪ್ರಧಾನ ಕಾರ್ಯದರ್ಶಿ ಮರಿಯಮ್ಮ ಖಜಾಂಚಿ ಮಹ್ಮದ್ ಹನೀಫ್, ಸಿಐಟಿಯು ನಾಯಕಿ ಎಚ್ ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್. ಶರಣಬಸವ, ಅಕ್ಕಮಹಾದೇವಿ. ಕಲ್ಯಾಣಮ್,ಮ ಶರಣಮ್ಮ ಪಾಟೀಲ, ಶೋಭಾ, ವಿಶಾಲಕ್ಷಮ್ಮ ತೆರೆಸಾ ಸಿದ್ದಮ್ಮ ಶೈನಾಜ್ ಬೇಗಂ, ತುಳುಜಾಬಾಯಿ, ಬಸಮ್ಮ, ಮಲ್ಲಮ್ಮ, ಗಂಗಮ್ಮ, ಹಸೇನ್ ರೇಣುಕಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.