ರಾಯಚೂರು: ನಗರ ಹೊರವಲಯದ ತ್ಯಾಜ್ಯದ ರಾಶಿಯಲ್ಲಿ ಕಳೆದ ವರ್ಷ ಸ್ಫೋಟ ಸಂಭವಿಸಿ ಚಿಂದಿ ಆಯುವ ಮಹಿಳೆಯೊಬ್ಬರು ಮೃತಪಟ್ಟಿದ್ದ ಘಟನಾ ಸ್ಥಳದಿಂದ ಸಂಗ್ರಹಿಸಿದ್ದ ಸ್ಯಾಂಪಲ್ಗಳನ್ನು ಬೆಂಗಳೂರಿನ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸುವಾಗ ಶುಕ್ರವಾರ ಸ್ಫೋಟಗೊಂಡಿವೆ ಎನ್ನುವ ಮಾಹಿತಿ ಬಂದಿದೆ ಎಂದು ಜಿಲ್ಲಾ ಪೊಲೀಸ್ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಸ್ಫೋಟದಿಂದಾಗಿ ಪ್ರಯೋಗಾಲಯದಲ್ಲಿ ಕೆಲವು ತಜ್ಞರು ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ರಾಯಚೂರಿನ ಪಾರಸವಾಟಿಕಾ ಕಾಲೋನಿ ಬಯಲಿನ ತ್ಯಾಜ್ಯರಾಶಿಯಲ್ಲಿ ಬಿದ್ದಿದ್ದ ಬ್ಯಾರೆಲ್ ಎತ್ತಿ ಅಲ್ಲಾಡಿಸಿದಾಗ ಸ್ಫೋಟ ಸಂಭವಿಸಿ ಸ್ಥಳದಲ್ಲೆ ಮಹಿಳೆ ಮೃತಪಟ್ಟು, ಮಹಿಳೆಯ ಪತಿ ಗಾಯಗೊಂಡಿದ್ದ ಘಟನೆ 2018 ರ ಅಕ್ಟೋಬರ್ನಲ್ಲಿ ನಡೆದಿತ್ತು. ಕಲಬುರ್ಗಿಯ ಎಫ್ಎಸ್ಎಲ್ ತಂಡವು ಸ್ಥಳಕ್ಕೆ ಬಂದು ಸ್ಯಾಂಪಲ್ಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದರು. ಅಲ್ಲಿಂದ ಬೆಂಗಳೂರಿಗೆ ಲ್ಯಾಬ್ಗೆ ಸ್ಯಾಂಪಲ್ಗಳನ್ನು ಕಳುಹಿಸಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ, ಬ್ಯಾರೆಲ್ ತಂದು ಹಾಕಿದ್ದ ಗಜಾನನ ಡೆಕೊರೆಟರ್ಸ್ ಮಾಲೀಕರಾದ ದಿರೇಂದ್ರ ಜೋಷಿ ಹಾಗೂ ಅರುಣ ಜೋಷಿ ಅವರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.