ರಾಯಚೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತ ರಕ್ಷಣಾ (ದೌರ್ಜನ್ಯ) ಸಮಿತಿ ಸಭೆಗಳನ್ನು ಸಮರ್ಪಕವಾಗಿ ನಡೆಸದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಕೊಡಲಾಗಿದೆ’ ಎಂದು ಕರ್ನಾಟಕ ರಾಜ್ಯ ಬಲಗೈ ಸಂಬಂಧಿತ ಛಲವಾದಿ, ಬ್ಯಾಗರ್ ಹಾಗೂ ಮಾಲಾ ಜಾತಿಗಳ ಒಳ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ರವೀಂದ್ರನಾಥ ಪಟ್ಟಿ ಹೇಳಿದರು.
‘ಜಿಲ್ಲಾ ಪೊಲೀಸ್ ಇಲಾಖೆಯು ದಾಖಲೆಗಳಲ್ಲಿ ಉಲ್ಲೇಖಿಸಲು ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ನಾಲ್ಕು ಬಾರಿ ಸಭೆಗಳನ್ನು ಕಾಟಾಚಾರಕ್ಕಾಗಿ ನಡೆಸಿದೆ. ಪರಿಶಿಷ್ಟರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದನೆ ದೊರೆಯುತ್ತಿಲ್ಲ’ ಎಂದು ಪತ್ರಿಕಾಭವನದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
‘ಪೊಲೀಸ್ ಅಧಿಕಾರಿಗಳು ಸಮಿತಿ ಸದಸ್ಯರಿಗೆ ಹಾಗೂ ದಲಿತ ಮುಖಂಡರಿಗೆ ಸಭೆಯ ಮಾಹಿತಿಯನ್ನೇ ನೀಡುವುದಿಲ್ಲ. ಸಭೆ ಆರಂಭವಾಗುವ 15 ನಿಮಿಷ ಮೊದಲು ಕರೆ ಮಾಡಿ ತಕ್ಷಣ ಸಭೆಗೆ ಹಾಜರಾಗುವಂತೆ ಸೂಚಿಸುತ್ತಾರೆ. ಪೂರ್ವ ತಯಾರಿ ಇಲ್ಲದೇ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಜಟಿಲ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ ಮೂರು ಸಾವಿರ ಮಂದಿ ನಕಲಿ ಜಾತಿ ಪ್ರಮಾಣಪತ್ರಗಳನ್ನು ಪಡೆದ ಮಾಹಿತಿ ಇದೆ. ಯಾರ ಬೇಕಾದರೂ ಯಾವಾಗ ಬೇಕಾದರೂ ತಮಗೆ ಬೇಕಿರುವ ಜಾತಿಪ್ರಮಾಣಪತ್ರಗಳನ್ನು ಪಡೆದುಕೊಳ್ಳುತ್ತಿರುವುದು ಈಗಲೂ ಮುಂದುವರಿದಿದೆ’ ಎಂದು ಆರೋಪ ಮಾಡಿದರು.
‘ಪ್ರಾಥಮಿಕ ಶಾಲೆ ಪ್ರವೇಶ ಸಂದರ್ಭದಲ್ಲಿ ನೋಂದಾಯಿಸಿದ ಜಾತಿಗಳು, ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ ಬದಲಾದ ಉದಾಹರಣೆಗಳು ಅನೇಕ ಇವೆ. ಹೀಗಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಅಲೆಮಾರಿಗಳಿಗೆ ಮೀಸಲಾತಿ ಕಲ್ಪಿಸಿ: ‘ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಮಾಡಲು ಮೂರು ವರ್ಗಗಳನ್ನು ರಚಿಸಿದರೂ ಒಂದೇ ಸಮುದಾಯಕ್ಕೆ ಜಾತಿಗಳನ್ನು ಮೂರು ಗುಂಪಿನಲ್ಲಿ ವಿಭಜಿಸಲಾಗಿದೆ. ‘ಸಿ’ ಗ್ರುಪ್ನಲ್ಲಿರುವ ಬಲಾಢ್ಯ ಸ್ಪರ್ಶ ಜಾತಿಗಳಗೊಂದಿಗೆ ಅಲೆಮಾರಿ ಜಾತಿಗಳನ್ನು ಸೇರಿಸಲಾಗಿದೆ. ಇದರಿಂದ ಅಲೆಮಾರಿಗಳಿಗೆ ಅನ್ಯಾಯವಾಗಲಿದೆ’ ಎಂದು ಆರೋಪಿಸಿದರು.
‘ರಾಜ್ಯ ಸರ್ಕಾರ ಆಯೋಗದ ವರದಿಯಲ್ಲಿ ಇರುವ ಕೆಲ ಲೋಪಗಳನ್ನು ಸರಿಪಡಿಸಬೇಕು. ಅಲೆಮಾರಿಗಳಿಗೆ ‘ಸಿ’ ಗ್ರುಪ್ನಲ್ಲಿ ಬಲಾಢ್ಯ ಸ್ಪರ್ಶ ಜಾತಿಗಳ ಪಟ್ಟಿಯಲ್ಲೇ ಪ್ರತ್ಯೇಕವಾಗಿ 1ರಷ್ಟು ಮೀಸಲಾತಿ ಒದಗಿಸಬೇಕು’ ಎಂದು ಒತ್ತಾಯಿಸಿದರು.
ನರಸಿಂಹಲು, ರಾಜು ಪಟ್ಟಿ, ಯಲ್ಲಪ್ಪ ಬೊಮ್ಮನಾಳ, ಕೆ. ಸಂತೋಷ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.