
ರಾಯಚೂರು: ನಗರದ ಹೊರ ವಲಯದ ಯರಮರಸ್ ಬಳಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿದರು.
ವಿಮಾನ ನಿಲ್ದಾಣದ ರನ್ ವೇ ಕಾಮಗಾರಿಯ ವೀಕ್ಷಣೆ ನಡೆಸಿ ಕಾಮಗಾರಿಯ ಪ್ರಗತಿಯ ಮಾಹಿತಿ ಪಡೆದುಕೊಂಡರು. ಒಟ್ಟು 1.7 ಕಿ ಮೀ ಉದ್ದದ ರನ್ ವೇ ಪೈಕಿ ಇದುವರೆಗೆ 800 ಮೀಟರ್ನಷ್ಟು ರನ್ವೇಗೆ ಮುರಂ ಹಾಕಿದ್ದು, ಬಾಕಿ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಳಿಕ ಜಿಲ್ಲಾಧಿಕಾರಿ , ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಕಟ್ಟಡಕ್ಕೆ ಈಗಾಗಲೇ ಕಾಲಂ ಹಾಗೂ ಮೇಲ್ಚಾವಣಿ ಹಾಕಿದ್ದು, ಈಗ ರೂಪ್ ಟ್ರಸ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಏರ್ ಟ್ರಾಪಿಕ್ ಕಂಟ್ರೋಲ್ ಬಿಲ್ಡಿಂಗ್ನ ಚತ್ತಿನ ಕಾಂಕ್ರಿಟ್ ಹಾಕಲಾಗುತ್ತಿದೆ. ಒಟ್ಟು 8 ಕಿ.ಮೀ ಪೈಕಿ 5 ಕಿ.ಮೀಟರ್ ಉದ್ದದ ಆವರಣಗೋಡೆ ಹಾಗೂ ರಸ್ತೆ ನಿರ್ಮಾಣವಾಗುತ್ತಿದೆ. ಒಟ್ಟು 12 ಸೆಕ್ಯುರಿಟಿ ವಾಚ್ ಟವರ್ ಪೈಕಿ ಇದೀಗ 6 ಟವರ್ಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ವಿಮಾನ ನಿಲ್ದಾಣದ ಆವರಣಗೋಡೆ ಒಳಭಾಗದಲ್ಲಿನ ಆಂತರಿಕ ರಸ್ತೆಗಳ ನಿರ್ಮಾಣ ಕಾಮಗಾರಿಯು ಸಹ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾಮಗಾರಿ ವೇಗ ಹೆಚ್ಚಿಸಲು ಸೂಚನೆ: ವಿಮಾನ ನಿಲ್ದಾಣ ಕಾಮಗಾರಿಯ ವೇಗ ಹೆಚ್ಚಿಸಬೇಕು. ಬಾಕಿ ಉಳಿಸಿದ ಎಲ್ಲ ಕಾರ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿ, ಸಂಬಂಧಿಸಿದ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ರಾಯಚೂರು ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಸುರೇಶ ವರ್ಮಾ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಮಹೇಶ್, ಗುತ್ತಿಗೆದಾರ ಕಂಪನಿ ಕೆಎಂವಿದ ಪ್ರತಿನಿಧಿ ಪ್ರವೀಣ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.