ADVERTISEMENT

ದೀಪದ ಹಬ್ಬದಲ್ಲಿ ಪಟಾಕಿ ಖರೀದಿ ಭರಾಟೆ: ವಾಲ್ಕಟ್ ಮೈದಾನದಲ್ಲಿ ಪಟಾಕಿ ಮಳಿಗೆಗಳು

ಚಂದ್ರಕಾಂತ ಮಸಾನಿ
Published 20 ಅಕ್ಟೋಬರ್ 2025, 5:41 IST
Last Updated 20 ಅಕ್ಟೋಬರ್ 2025, 5:41 IST
ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಗಳು
ರಾಯಚೂರಿನ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ತೆರೆಯಲಾದ ಪಟಾಕಿ ಮಾರಾಟ ಮಳಿಗೆಗಳು   

ರಾಯಚೂರು: ಪೊಲೀಸ್‌ ಇಲಾಖೆಯಿಂದ ತಡವಾಗಿ ಅನುಮತಿ ದೊರೆತಿದ್ದರಿಂದ ಶನಿವಾರ ಸಂಜೆ ಬಸವೇಶ್ವರ ವೃತ್ತದ ಸಮೀಪ ವಾಲ್ಕಟ್‌ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳು ಕಾರ್ಯಾರಂಭ ಮಾಡಿವೆ.

ಅನೇಕ ಕುಟುಂಬಗಳು ಮಕ್ಕಳೊಂದಿಗೆ ವಾಲ್ಕಟ್‌ ಮೈದಾನ ಆಗಮಿಸಿ ಮಳಿಗೆಗಳಿಗೆ ಭೇಟಿಕೊಟ್ಟು ಹೊಸ ಪಟಾಕಿಗಳ ಬಗ್ಗೆ ಕೇಳಿ ತಿಳಿದುಕೊಂಡರು. ತಮಗೆ ಇಷ್ಟವಾದ ಪಟಾಕಿಗಳನ್ನು ಕೊಂಡೊಯ್ದರು. ಪಟಾಕಿ ಅಂಗಡಿಗಳ ಮಾಲೀಕರು ಹಸಿರು ಪಟಾಕಿಗಳನ್ನು ಪರಿಚಯಿಸಿದರೂ ಯುವಕರು ಹೆಚ್ಚು ಶಬ್ದ ಮಾಡುವ ಪಟಾಕಿಗಳನ್ನೇ ಕೇಳಿ ಖರೀದಿಸಿದರು.

ರಜಾ ದಿನವಾದ ಭಾನುವಾರ ಮಕ್ಕಳು ಹಾಗೂ ಯುವಕರು ಉತ್ಸಾಹದಿಂದ ಮಳಿಗೆಗಳಿಗೆ ಭೇಟಿಕೊಟ್ಟರು. ಬೆಳಿಗ್ಗೆಯಿಂದ ರಾತ್ರಿ 10 ಗಂಟೆಯ ವರೆಗೂ ಮಳಿಗೆಗಳು ಗ್ರಾಹಕರಿಂದ ಕಿಕ್ಕಿರಿದು ತುಂಬಿದ್ದವು.

ADVERTISEMENT

ಮಕ್ಕಳ ಅಚ್ಚುಮೆಚ್ಚಿನ ಸುರುಸುರ ಬತ್ತಿ, ಹೂಬಾಣ, ರಾಕೇಟ್‌ಗಳು ಮಾರಾಟವಾಗುತ್ತಿವೆ. ಬೆಳಿಗ್ಗೆ ಗ್ರಾಮೀಣ ಪ್ರದೇಶದ ಜನ ಪಟಾಕಿ ಖರೀದಿಗೆ ಬಂದರೆ, ಸಂಜೆ ವೇಳೆಗೆ ಪಟ್ಟಣ ಪ್ರದೇಶದ ಜನ ತಂಡೋಪ ತಂಡವಾಗಿ ಬರುತ್ತಿದ್ದಾರೆ. ಹೀಗಾಗಿ ಸಂಜೆ ಮಾರಾಟ ಮಳಿಗೆಗಳಲ್ಲಿ ಹೆಚ್ಚು ಜನದಟ್ಟಣೆಯಾಗುತ್ತಿದೆ.

‘ಪಟಾಕಿಗೆ ಶೇಕಡ 20ರಷ್ಷು ಜಿಎಸ್‌ಟಿ ವಿಧಿಸಲಾಗಿದೆ. ತೆರಿಗೆಯಿಂದಾಗಿ ಪಟಾಕಿ ಸ್ವಲ್ಪ ಮಟ್ಟಿಗೆ ದುಬಾರಿಯಾಗಿವೆ. ಸಾಮಾನ್ಯ ಪಟಾಕಿಗಳು ₹ 30ರಿಂದ ₹ 80, ಸುರಸುರ ಬತ್ತಿ ₹ 30ರಿಂದ 100, ಹೂಬಾಣ 10 ಬಾಣಗಳು ಇರುವ ಒಂದು ಪ್ಯಾಕೇಟ್‌ಗೆ 300, ರಾಕೇಟ್ ಹಾಗೂ ಗುಳ್ಳೆಬಾಣ ಕನಿಷ್ಠ ₹ 300ರಿಂದ ₹ 500ರ ವರೆಗೂ ಇವೆ’ ಎಂದು ಪಟಾಕಿ ವ್ಯಾಪಾರಿ ಬಿ.ಕಿರಣರಾಜೇಂದ್ರ ತಿಳಿಸಿದರು.

‘ದೀಪಗಳ ಜತೆಗೆ ಪಟಾಕಿ ಇದ್ದರೆ ಮಾತ್ರ ಹಬ್ಬದ ಸಡಗರ ಹೆಚ್ಚುತ್ತದೆ. ಹೀಗಾಗಿ ಕುಳ್ಳಿಬಾಣ, ಪಿಕಾಕ್‌ ಹಾಗೂ ಡ್ರೋಣ ಸೇರಿ ವಿವಿಧ ಬಗೆಯ ₹2 ಸಾವಿರ ಬೆಲೆಯ ಪಟಾಕಿ ಖರೀದಿಸಿದ್ದೇವೆ. ಪಿಕಾಕ್‌ ಪಟಾಕಿ ಈ ಬಾರಿಯ ಆಕರ್ಷಣೆಯಾಗಿದೆ‘ ಎಂದು ಗ್ರಾಹಕ ಜಯಕುಮಾರ ದೇಸಾಯಿ ಹೇಳಿದರು.

ಪಟಾಕಿ ಖರೀದಿಸಿದ ಸಂಭ್ರಮದಲ್ಲಿ ಬಾಲಕ

ಅ.24 ರವರೆಗೆ ಮಾರಾಟ

ಹದಿನೈದು ಮಾದರಿಯ ಕಟ್ಟುನಿಟ್ಟಿನ ಷರತ್ತುಗಳನ್ನ ಪಾಲಿಸುವಂತೆ ಸೂಚಿಸಿ ಒಟ್ಟು 36 ಮಳಿಗೆಗಳಿಗೆ ಅಕ್ಟೋಬರ್ 24 ವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಬಿಸಿಲು ಹೆಚ್ಚಿರುವ ಕಾರಣ ಎಲ್ಲ ಪಟಾಕಿ ಮಳಿಗೆಗಳ ಮುಂದೆ ಕಡ್ಡಾಯವಾಗಿ ಡ್ರಮ್‌ಗಳಲ್ಲಿ ನೀರು ತುಂಬಿ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಗ್ನಿ ಶಾಮಕ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ. ಮಾರಾಟದ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಯಾವುದೇ ಮುಲಾಜಿಲ್ಲದೇ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.