ADVERTISEMENT

ಉಪ ಸಮಿತಿಗೆ ಹೊರಜಿಲ್ಲೆಯ ನೇಮಕಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:43 IST
Last Updated 21 ಸೆಪ್ಟೆಂಬರ್ 2019, 13:43 IST
ಡಾ.ರಜಾಕ್‌ ಉಸ್ತಾದ
ಡಾ.ರಜಾಕ್‌ ಉಸ್ತಾದ   

ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶದ 371 ಜೆ ಕಾನೂನು ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶೆ ಮಾಡುವ ಸಚಿವ ಸಂಪುಟದ ಉಪಸಮಿತಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸದಸ್ಯರ ನೇಮಕದಲ್ಲಿ ನಿಯಮ ಪಾಲನೆ ಮಾಡಿಲ್ಲ. ಹೊಸ ಜಿಲ್ಲೆಯವರನ್ನು ನೇಮಿಸಿದ್ದು ಖಂಡನೀಯ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ತಿಳಿಸಿದ್ದಾರೆ.

2013ರಲ್ಲಿ ಎಚ್‌.ಕೆ.ಪಾಟೀಲ ಅವರನ್ನು ನೇಮಿಸಿರುವುದಕ್ಕೆ ಈ ಭಾಗದಲ್ಲಿ ವಿರೋಧ ವ್ಯಕ್ತವಾಗಿತ್ತು. ಆನಂತರ ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಪ್ರಿಯಾಂಕ ಖರ್ಗೆ ಅವರನ್ನು ನೇಮಿಸಲಾಗಿತ್ತು. ಈ ಭಾಗದ ಉಸ್ತುವಾರಿ ಸಚಿವರು ಹಾಗೂ ಕಾನೂನು ಸಚಿವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ಆದರೆ, ಈಗಿನ ಸರ್ಕಾರ ರಾಯಚೂರು ಹಾಗೂ ಬೀದರ್‌ ಉಸ್ತುವಾರಿ ಸಚಿವರನ್ನು ಸದಸ್ಯರನ್ನಾಗಿ ನೇಮಿಸಿ, ಬಳ್ಳಾರಿ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ನೇಮಿಸದಿರುವುದು ಮತ್ತು ಈ ಭಾಗಕ್ಕೆ ಸಂಬಂಧವಿಲ್ಲದಿರುವ ಉತ್ತರ ಕನ್ನಡ ಉಸ್ತುವಾರಿ ಶಶಿಕಲಾ ಜೋಲ್ಲೆ ಅವರನ್ನು ನೇಮಿಸುವ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಚಿವ ಸಂಪುಟದಲ್ಲಿ ಈ ಭಾಗದಿಂದ ಒಬ್ಬರನ್ನು ಮಾತ್ರ ಸೇರಿಸಿಕೊಂಡು ಇತಿಹಾಸದಲ್ಲಿ ಯಾವ ಸರ್ಕಾರವು ಮಾಡದಷ್ಟು ಅನ್ಯಾಯ ಮಾಡಲಾಗಿದೆ. ಈಗ ಸಮಿತಿ ರಚನೆಯಲ್ಲಿ ಈ ಭಾಗಕ್ಕಿಂತ ಹೊರಗಿನ ಸಚಿವರೇ ಹೆಚ್ಚಿರುವುದರಿಂದ ಈ ಭಾಗಕ್ಕೆ ನ್ಯಾಯ ಸಿಗುವುದು ಕನಸಾಗಲಿದೆ. ಆದ್ದರಿಂದ, ಸಮಿತಿ ಹೊರ ಜಿಲ್ಲೆಯ ಸಚಿವರನ್ನು ಅಧ್ಯಕ್ಷರು ಹಾಗೂ ಸದಸ್ಯರನ್ನಾಗಿ ನೇಮಿಸಿರುವುದು ಖಂಡನೀಯವಾಗಿದ್ದು, ಸ್ಥಳೀಯ ಸಚಿವರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.