ADVERTISEMENT

ರಿಮ್ಸ್‌ಗೆ ನ್ಯಾಯಾಧೀಶರ ದಿಢೀರ್ ಭೇಟಿ: ವೈದ್ಯರ ಹಾಜರಾತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 7:33 IST
Last Updated 21 ಜುಲೈ 2025, 7:33 IST
ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಎ. ಸಾತ್ವಿಕ್ ಭೇಟಿ ವೈದ್ಯರ ಹಾಜರಾತಿ ಪರಿಶೀಲಿಸಿದರು
ರಾಯಚೂರಿನ ರಿಮ್ಸ್‌ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್. ಎ. ಸಾತ್ವಿಕ್ ಭೇಟಿ ವೈದ್ಯರ ಹಾಜರಾತಿ ಪರಿಶೀಲಿಸಿದರು   

ರಾಯಚೂರು: ರಾಯಚೂರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಎ. ಸಾತ್ವಿಕ್ ಶನಿವಾರ ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆಯ ಬೇರೆ ಬೇರೆ ವಿಭಾಗಗಳಿಗೆ ಭೇಟಿ ನೀಡಿದರಲ್ಲದೇ, ಆಸ್ಪತ್ರೆಯ ಪ್ರಾಂಗಣದಲ್ಲಿ ಕುಳಿತಿದ್ದ ರೋಗಿಗಳೊಂದಿಗೆ ಮಾತನಾಡಿ ಅವರ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಕೇಳಿ ಮಾಹಿತಿ ಪಡೆದರು.

ಮೊದಲಿಗೆ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗಕ್ಕೆ ತೆರಳಿ ಅಲ್ಲಿದ್ದ ನರ್ಸ್ ಸಿಬ್ಬಂದಿಗೆ ಡ್ಯೂಟಿ ಡಾಕ್ಟರ್ ಎಲ್ಲಿದ್ದಾರೆ? ಎಂದು ಕೇಳಿದರು. ವೈದ್ಯರು, ಆಪರೇಷನ್ ಥೇಟರ್‌ನಿಂದ ಆಗಮಿಸಿ ಇದೀಗ ಊಟಕ್ಕೆ ತೆರಳಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಮಕ್ಕಳ ಹೊರರೋಗಿಗಳ ವಿಭಾಗಕ್ಕೆ ತೆರಳಿ ಅಲ್ಲಿ ವೈದ್ಯರು ಇರುವುದನ್ನು ನ್ಯಾಯಾಧೀಶರು ಖಚಿತಪಡಿಸಿಕೊಂಡರು. ಬಳಿಕ ಎಲುವು ಮತ್ತು ಕೀಲು ವಿಭಾಗಕ್ಕೆ ತೆರಳಿದಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ಇಂಟರ್ನಿಗಳು ರೋಗಿಯೊಬ್ಬರಿಗೆ ಪ್ಲಾಸ್ಟರ್ ಹಾಕುತ್ತಿರುವುದನ್ನು ಗಮನಿಸಿ, ಯಾಕೆ ವೈದ್ಯರಿಲ್ಲವೇ? ರೋಗಿಗೆ ಏನಾದರು ಹೆಚ್ಚುಕಮ್ಮಿಯಾದರೆ ಯಾರು ಹೊಣೆ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಬಳಿಕ ಕಿವಿ-ಮೂಗು-ಗಂಟಲು (ಇಎನ್‌ಟಿ) ವಿಭಾಗ ಮತ್ತು ನೇತ್ರ ವಿಜ್ಞಾನ ವಿಭಾಗಗಳಿಗೆ ತೆರಳಿದಾಗ ಎರಡೂ ಕಡೆಗಳಲ್ಲೂ ವೈದ್ಯರು ಇರಲಿಲ್ಲ. ಎರಡೂ ಕಡೆಗಳಲ್ಲಿಯೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಎಂಬಿಬಿಎಸ್ ಇಂಟರ್ನಿಗಳೇ ರೋಗಿಗಳನ್ನು ನೋಡುತ್ತಿರುವುದನ್ನು ನ್ಯಾಯಾಧೀಶರು ಖಚಿತಪಡಿಸಿಕೊಂಡರು. ಇಷ್ಟೊತ್ತಿನವರೆಗೆ ವೈದ್ಯರು ಇದ್ದರು ಇದೀಗ ಊಟಕ್ಕೆ ತೆರಳಿದ್ದಾರೆ ಎಂದು ಇಎನ್‌ಟಿ ಮತ್ತು ನೇತ್ರ ವಿಜ್ಞಾನ ವಿಭಾಗದಲ್ಲಿದ್ದ ಎಂಬಿಬಿಎಸ್ ಇಂಟರ್ನಿಗಳು ಪ್ರತಿಕ್ರಿಯಿಸಿದರು.

ಬಳಿಕ ನ್ಯಾಯಾಧೀಶರು, ಚರ್ಮರೋಗ ವಿಭಾಗಕ್ಕೆ ತೆರಳಿದಾಗ ಅಲ್ಲಿಯು ಸಹ ವೈದ್ಯರು ಕಾಣಿಸದೇ ಇರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಇದೆ ವೇಳೆ, ನ್ಯಾಯಾಧೀಶರ ಬಳಿಗೆ ಆಗಮಿಸಿದ ನೇತ್ರ ವಿಜ್ಞಾನ ವಿಭಾಗದ ವೈದ್ಯರೊಬ್ಬರು ತಾವು ಕೆಲಸದ ಮೇಲೆ ಒಪೆಕ್ ಆಸ್ಪತ್ರೆಗೆ ಹೋಗಿದ್ದಾಗಿ ಹೇಳಿದರು.

ಜನರಲ್ ಸರ್ಜರಿ ವಿಭಾಗದಲ್ಲಿ ಒಬ್ಬ ವೈದ್ಯರು ರಜೆ ಮೇಲೆ ತೆರಳಿರುವುದನ್ನು ಮತ್ತೊಬ್ಬ ವೈದ್ಯರು ಊಟದ ಅವಧಿ ಮೂಗಿದರೂ ಬಾರದೇ ಇರುವುದನ್ನು ನ್ಯಾಯಾಧೀಶರು ತಿಳಿದುಕೊಂಡರು.

‘ರಿಮ್ಸ್‌ಗೆ ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳೇ ಹೆಚ್ಚಾಗಿ ಬರುತ್ತಾರೆ. ಸರಿಯಾದ ವೈದ್ಯಕೀಯ ಚಿಕಿತ್ಸೆ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಎಲ್ಲ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಊಟಕ್ಕೆ ತೆರಳಿದ್ದಲ್ಲಿ ಬೇಗನೇ ಕರ್ತವ್ಯಕ್ಕೆ ಆಗಮಿಸಬೇಕು‘ ಎಂದು ಸೂಚಿಸಿದರು.

ಉಪ ವೈದ್ಯಕೀಯ ಅಧೀಕ್ಷಕ ಡಾ.ಅರವಿಂದ ಸಂಗಾವಿ, ಆಸ್ತಿ ವಿಭಾಗದ ಅಧಿಕಾರಿ ಬಸವರಾಜ, ಮಕ್ಕಳ ತಜ್ಞ ವೈದ್ಯ ಡಾ.ಗೋಪಾಲ, ಮಕ್ಕಳ ಹೊರರೋಗಿ ವಿಭಾಗದ ಡಾ.ಪ್ರಕಾಶ ಹಾಜರಿದ್ದರು.

ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಬೋಧಕ ಆಸ್ಪತ್ರೆಯ ಬಗ್ಗೆ ಜನರಿಗೆ ವಿಶ್ವಾಸ ಬರುವ ಹಾಗೆ ಎಲ್ಲ ವೈದ್ಯರು ಕಾರ್ಯನಿರ್ವಹಿಸಬೇಕು.
ಎಚ್. ಎ. ಸಾತ್ವಿಕ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.