ADVERTISEMENT

ರಾಯಚೂರು: ಗಣವೇಷಧಾರಿಗಳ ಪಥಸಂಚಲನಕ್ಕೆ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 7:36 IST
Last Updated 1 ನವೆಂಬರ್ 2025, 7:36 IST
ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ಅಖಂಡ ಭಾರತದ ನಕ್ಷೆಯೊಳಗೆ ಭಾರತಮಾತೆ ಚಿತ್ರ ಅಳವಡಿಸಲಾಗಿದೆ
ರಾಯಚೂರಿನ ವಾಲ್ಕಟ್ ಮೈದಾನದಲ್ಲಿ ಅಖಂಡ ಭಾರತದ ನಕ್ಷೆಯೊಳಗೆ ಭಾರತಮಾತೆ ಚಿತ್ರ ಅಳವಡಿಸಲಾಗಿದೆ   

ರಾಯಚೂರು: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಹಾಗೂ ವಿಜಯದಶಮಿ ಉತ್ಸವ ಅಂಗವಾಗಿ ನ.1ರಂದು ನಗರದಲ್ಲಿ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ ನಡೆಯಲಿದೆ.

ಶನಿವಾರ ಸಂಜೆ 4.15ಕ್ಕೆ ನಗರದ ಗದ್ವಾಲ ರಸ್ತೆಯ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದ ಆವರಣದಿಂದ ಪಥ ಸಂಚಲನ ಆರಂಭವಾಗಿ ಗದ್ವಾಲ್‌ ರಸ್ತೆ, ಬಸವನಬಾವಿ ವೃತ್ತ, ಪಟೇಲ್‌ ವೃತ್ತ, ಸೂಪರ್‌ ಮಾರ್ಕೆಟ್‌, ಬಟ್ಟೆ ಬಜಾರ್, ಚಂದ್ರಮೌಳಿ ವೃತ್ತ, ಟಿಪ್ಪು ಸುಲ್ತಾನ್‌ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಸಂಜೆ 6 ಗಂಟೆಗೆ ವಾಲ್ಕಟ್ ಮೈದಾನಕ್ಕೆ ಬರಲಿದೆ. ಅಲ್ಲಲ್ಲಿ ಮಹಾದ್ವಾರಗಳನ್ನು ನಿರ್ಮಿಸಿ ಭಾರತ ಮಾತೆ ಹಾಗೂ ಕನ್ನಡಾಂಬೆಯ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಹಾಗೂ ಆರ್‌ಎಸ್‌ಎಸ್‌ನ ಎರಡನೇ ಸರ ಸಂಘಚಾಲಕ ಮಾಧವ ಸದಾಶಿವರಾವ್ ಗೋಲ್ವಾಲ್ಕರ್ ಅವರ ಭಾವಚಿತ್ರಗಳು ನಗರದಲ್ಲಿ ಅಲ್ಲಲ್ಲಿ ರಾರಾಜಿಸುತ್ತಿವೆ.

ADVERTISEMENT

ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಎಂ.ಆರ್, ಆರ್‌ಎಸ್‌ಎಸ್‌ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ವಿಭಾಗ ಪ್ರಮುಖ ಕಲಬುರಗಿಯ ಕೃಷ್ಣಾ ಜೋಷಿ ಆಗಮಿಸಲಿದ್ದಾರೆ. ವಾಲ್ಕಟ್‌ ಮೈದಾನದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಅಖಂಡ ಭಾರತದ ಚಿತ್ರ ಅಳವಡಿಸಲಾಗಿದೆ.

ಪಥಸಂಚಲನ ಮಾರ್ಗಗಳಲ್ಲಿ ಎರಡೂ ಬದಿಗೆ ಕೇಸರಿ ಧ್ವಜಗಳನ್ನು ಕಟ್ಟಲಾಗಿದೆ. ವಿದ್ಯುತ್‌ ಕಂಬಗಳಿಗೂ ಕೇಸರಿ ಬಟ್ಟೆ ಕಟ್ಟಲಾಗಿದೆ. ವೃತ್ತಗಳಲ್ಲಿ ಬಂಟಿಂಗ್ಸ್‌ ಅಳವಡಿಸಲಾಗಿದೆ.

ಪಥ ಸಂಚಲನದಲ್ಲಿ ಎರಡು ಸಾವಿರ ಗಣವೇಷಧಾರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಥ ಸಂಚಲನ ಸಾಗುವ ಮಾರ್ಗದಲ್ಲಿ ಮಹಿಳೆಯರು ರಂಗೋಲಿ ಬಿಡಿಸಿ, ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಲು ಸೂಚನೆ ನೀಡಲಾಗಿದೆ.

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದರೂ, ನಗರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ಪಥ ಸಂಚಲನದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಬಿಗಿಗೊಳಿಸಲಾಗಿದೆ. ಆಯಕಟ್ಟಿನ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್‌ ಪಡೆಗಳನ್ನು ನಿಯೋಜಿಸಲಾಗಿದೆ.

ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಕೇಸರಿ ಬಂಟಿಂಗ್ಸ್ ಅಳವಡಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.