ಶಕ್ತಿನಗರ: ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸುವ ಹೊಣೆ ನಮ್ಮ ಮೇಲಿದೆ. ಅಲ್ಲದೆ ಅವರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಯಚೂರು ಮಕ್ಕಳ ಸಹಾಯವಾಣಿ ಸಂಯೋಜಕ ಸುದರ್ಶನ ಹೇಳಿದರು.
ರಾಯಚೂರು ತಾಲ್ಲೂಕಿನ ಶಕ್ತಿನಗರದ ಸಂಗಣ್ಣ ಮುತ್ಯಗುಡಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ದೇವಸೂಗೂರು ಗ್ರಾಮದ ಜನತಾ ಕಾಲೊನಿಯ ಯುನಿಕ್ ಸ್ಕೂಲ್ ಆಫ್ ಲರ್ನಿಂಗ್ ಶಾಲೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ಪೊಲೀಸ್ ಇಲಾಖೆಯ ರಸ್ತೆ ನಿಯಮಗಳ ತಿಳಿವಳಿಕೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ನಿರಂತರ ಜಾಗೃತಿ ಮತ್ತು ನಿಗಾ ಅಗತ್ಯವಾಗಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕ ಅವರನ್ನು ಎಲ್ಲ ರೀತಿಯಲ್ಲಿ ಬಲಿಷ್ಠರನ್ನಾಗಿಸಬೇಕಿದೆ ಎಂದರು.
ಶಕ್ತಿನಗರ ಠಾಣೆ ಪಿಎಸ್ಐ ರಾಮಚಂದ್ರಪ್ಪ ಮಾತನಾಡಿ, ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಮತ್ತು ಮಕ್ಕಳಿಗೆ ದಾರಿದೀಪವಾಗುವಂತಹ ಕಾರ್ಯ ಮಾಡಲು ಪೊಲೀಸರು ಸಿದ್ಧರಿದ್ದಾರೆ. ದೌರ್ಜನ್ಯ, ಕಿರುಕುಳ ನಡೆದಲ್ಲಿ ಮಕ್ಕಳು ಭಯಪಡದೆ, ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಮಹಮದ್ ಗೌಸ್, ಗ್ರಾಮೀಣ ಖಾಸಗಿ ಶಾಲೆಗಳ ಗೌರವಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಅಧ್ಯಕ್ಷ ರವಿಕುಮಾರ ಮನ್ಸಲಾಪುರ, ಉಪಾಧ್ಯಕ್ಷ ಮಹಾಂತೇಶ ಯಾದವ, ಸದಸ್ಯರಾದ ಎಸ್.ಹುಸೇನ್ ಮಲಿಯಾಬಾದ, ನರಸಪ್ಪ , ಜರ್ನಾಧನ ಜೇಗರಕಲ್, ಸಿಂಗನೋಡಿ ಕೃಷ್ಣಾರೆಡ್ಡಿ, ಎಂ.ಜಿ.ಶಾಲೆ ಮಮದಾಪುರ ಶಾಲೆ ಅಧ್ಯಕ್ಷ ಬಸನಗೌಡ, ಯುನಿಕ್ ಸ್ಕೂಲ್ ಆಫ್ ಲರ್ನಿಂಗ್ ಶಾಲೆಯ ಕಾರ್ಯದರ್ಶಿ ವೀರೇಶ, ಸಂಗಣ್ಣ ಮುತ್ಯಗುಡಿ ಪ್ರಾಥಮಿಕ ಶಾಲೆಯ ಅಧ್ಯಕ್ಷ ಮಾಣಿಕ್ಯಮ್ಮ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.