ADVERTISEMENT

ಮಾನ್ವಿ: ತಹಶೀಲ್ದಾರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ, ದೂರು

ಪ್ರಕರಣ ದಾಖಲಿಸಲು ವಿವಿಧ ಸಂಘಟನೆಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:20 IST
Last Updated 25 ಸೆಪ್ಟೆಂಬರ್ 2020, 2:20 IST
ಮಾನ್ವಿಯಲ್ಲಿ ಗುರುವಾರ ದಸಂಸ (ಭೀಮ ಬಣ) ಸಂಘಟನೆಯ ಸದಸ್ಯರು ಉಪತಹಶೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಮಾನ್ವಿಯಲ್ಲಿ ಗುರುವಾರ ದಸಂಸ (ಭೀಮ ಬಣ) ಸಂಘಟನೆಯ ಸದಸ್ಯರು ಉಪತಹಶೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಮಾನ್ವಿ: ತಹಶೀಲ್ದಾರ್ ಅಮರೇಶ ಬಿರಾದಾರ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳಾ ಶಿರಸ್ತೆದಾರರೊಬ್ಬರು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.

ಬುಧವಾರ ಈ ಕುರಿತು ಕ್ರಮ ಕೈಗೊಂಡಿರುವ ಜಿಲ್ಲಾಧಿಕಾರಿ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಸಿಡಿ ಪರಿಶೀಲಿಸಿ ಶೀಘ್ರ ವರದಿ ಸಲ್ಲಿಸುವಂತೆ ಲೈಂಗಿಕ ಕಿರುಕುಳ ದೂರು ನಿವಾರಣ ಸಮಿತಿಯ ಅಧ್ಯಕ್ಷೆ ಆರ್.ಇಂದಿರಾ ಅವರಿಗೆ ಸೂಚನೆ ನೀಡಿದ್ದಾರೆ.

ಸ್ಥಳೀಯ ಸಂಘಟನೆಗಳು ತಹಶೀಲ್ದಾರ್ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿವೆ.

ADVERTISEMENT

ಆಗ್ರಹ: ದಲಿತ ಸಂಘರ್ಷ ಸಮಿತಿ (ಭೀಮ ಬಣ) ಮತ್ತು ಸಿಪಿಐ (ಎಂಎಲ್) ಪಕ್ಷದ ಕಾರ್ಯಕರ್ತರು ಗುರುವಾರ ತಹಶೀಲ್ದಾರ್ ಅಮರೇಶ ಬಿರಾದಾರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಉಪತಹಶೀಲ್ದಾರ್ ತುಳಜಾರಾಮ್ ಸಿಂಗ್ ಅವರಿಗೆ ಪ್ರತ್ಯೇಕವಾಗಿ ಸಲ್ಲಿಸಿದರು.

ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಸೀಕಲ್, ಮುಖಂಡರಾದ ನರಸಪ್ಪ ಜೂಕೂರು, ಕಾಶೀನಾಥ ಕುರ್ಡಿ, ಸಾಬಣ್ಣ ಕಪಗಲ್, ದತ್ತಾತ್ರೇಯ ಕೊಟ್ನೇಕಲ್ , ಸಿಪಿಐ (ಎಂಎಲ್) ಪಕ್ಷದ ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಬಸವರಾಜ ನಕ್ಕುಂದಿ, ಪ್ರಕಾಶ ತಡಕಲ್, ಯೇಸು ಅಮರೇಶ್ವರ ಕ್ಯಾಂಪ್ ಮತ್ತಿತರರು ಇದ್ದರು.

ಖಂಡನೆ: ಮಹಿಳಾ ಸಿಬ್ಬಂದಿಗೆ ತಹಶೀಲ್ದಾರ್ ಲೈಂಗಿಕ ಕಿರುಕುಳ ನೀಡಿರುವ ಘಟನೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಖಂಡಿಸಿದ್ದಾರೆ.

ಪ್ರಕರಣದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷ ಶ್ರೀಶೈಲಗೌಡ ಮತ್ತು ಪದಾಧಿಕಾರಿಗಳಾದ ಹಂಪಣ್ಣ ಚೆಂಡೂರು, ಸುರೇಶ ಕುರ್ಡಿ, ವೆಂಕಣ್ಣ ಯಾದವ್, ಶಿವಕುಮಾರ ರಾಮದುರ್ಗ, ಪಿ.ಪ್ರಸಾದ, ಸಿ.ಎಂ.ನರಸಿಂಹ, ಸುರೇಶಕುಮಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.