ADVERTISEMENT

ಪ್ರತಾಪಗೌಡ ಪಕ್ಷದ್ರೋಹಿ: ಸಿದ್ದರಾಮಯ್ಯ ವಾಗ್ದಾಳಿ

ಮಸ್ಕಿ ಪಟ್ಟಣದ ತೇರಬೀದಿಯಲ್ಲಿ ಕಾಂಗ್ರೆಸ್‌ ಪಕ್ಷದ ಬಹಿರಂಗ ಸಭೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 13:59 IST
Last Updated 29 ಮಾರ್ಚ್ 2021, 13:59 IST
ಮಸ್ಕಿ ಪಟ್ಟಣದಲ್ಲಿ ಉಪಚುನಾವಣೆ ಸಂಬಂಧ ಸೋಮವಾರ ತೇರಬೀದಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಗೆ ಬೆಂಬಲಿಗರೊಬ್ಬರು ಕುರಿಯನ್ನು ಕಾಣಿಕೆಯಾಗಿ ನೀಡಿದರು
ಮಸ್ಕಿ ಪಟ್ಟಣದಲ್ಲಿ ಉಪಚುನಾವಣೆ ಸಂಬಂಧ ಸೋಮವಾರ ತೇರಬೀದಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಬಹಿರಂಗ ಪ್ರಚಾರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಗೆ ಬೆಂಬಲಿಗರೊಬ್ಬರು ಕುರಿಯನ್ನು ಕಾಣಿಕೆಯಾಗಿ ನೀಡಿದರು   

ಮಸ್ಕಿ (ರಾಯಚೂರು): 'ಮಸ್ಕಿ ಉಪಚುನಾವಣೆ ಏಕೆ ಬಂತು ಎಂಬುದು ಜನರಿಗೆ ಗೊತ್ತಿದೆ. ಪ್ರತಾಪಗೌಡ ಪಾಟೀಲ ಅವರು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಲಂಚಕ್ಕೆ ಬಲಿಯಾಗಿ ಸುಮಾರು ₹20ರಿಂದ 30 ಕೋಟಿಗೆ ಮಾರಾಟವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ' ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.

ಪಟ್ಟಣದ ತೇರ ಬೀದಿಯಲ್ಲಿ ಕಾಂಗ್ರೆಸ್‌ನಿಂದ ಸೋಮವಾರ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

'ಪ್ರತಾಪಗೌಡ ಮೇಲೆ ಮೊದಲೇ ಅನುಮಾನ ಇತ್ತು. 2013ರಲ್ಲಿ ಅಮರೇಗೌಡ ಬಯ್ಯಾಪುರ ಮತ್ತು ಎನ್. ಎಸ್. ಬೋಸರಾಜು ಸೇರಿಕೊಂಡು ಪ್ರತಾಪಗೌಡ ಕಾಂಗ್ರೆಸ್ಸಿಗೆ ಕರೆತಂದರು' ಎಂದರು.

ADVERTISEMENT

'ಎರಡು ಸಲ ಶಾಸಕ ಮಾಡಿದ ಪಕ್ಷಕ್ಕೆ ದ್ರೋಹ ಬಗೆದು ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿಗೆ ಹೋಗಿದ್ದಾರೆ.ಅವರನ್ನು ಸೋಲಿಸಬೇಕಾಗಿದ್ದು ಮಸ್ಕಿ ಕ್ಷೇತ್ರದ ಜನರ ಕೆಲಸ. ಬಸನಗೌಡ ತುರ್ವಿಹಾಳ ಅವರನ್ನು ವಿಧಾನಸಭೆ ಕಳಿಸಲು ಮಸ್ಕಿ ವಿಧಾನಸಭಾ ಕ್ಷೇತ್ರ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ' ಎಂದರು.

'ಗ್ರಾಮ ಗ್ರಾಮಕ್ಕೆ ಬಂದು ಮತದಾರರನ್ನು ಕೇಳುತ್ತೇನೆ. ಬಸನಗೌಡ ಪರ ಮತಯಾಚಿಸುತ್ತೇನೆ' ಎಂದು ಹೇಳಿದರು.

'ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಎರಡುವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಎಲ್ಲಾ ಜಾತಿಗಳ ಬಡವರಿಗೆ 7 ಕೆಜಿ ಉಚಿತವಾಗಿ ಅಕ್ಕಿ ಕೊಡುವ ಯೋಜನೆ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಬಡವರಿಗೆ ಅಕ್ಕಿ ಕೊಡುವುದನ್ನು 4 ಕೆಜಿ ಕಡಿಮೆ ಮಾಡಿದ್ದಾರೆ. ಜನರ ಹಣ ಜನರಿಗೆ ಕೊಡಲು ಇವರಪ್ಪನ ಮನೆ ಗಂಟೇನು ಹೋಗ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡಲಾಗುವುದು' ಎಂದು ತಿಳಿಸಿದರು.

'ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಲಿಲ್ಲ. 2018ನೇ ಸಾಲಿನ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಸಾಲ ಮನ್ನಾ ಮಾಡಿಲ್ಲ. ಇಂಥವರಿಗೆ ನೀವು ಕೊಡ್ತೀರಾ' ಎಂದು ಜನರನ್ನು ಪ್ರಶ್ನಿಸಿದರು.

'ಪ್ರತಾಪ್ ಗೌಡರಂತಹ ಪಕ್ಷ ದ್ರೋಹಿಗಳಿಗೆ ಕರ್ನಾಟಕ ರಾಜಕೀಯದಲ್ಲಿ ಬೆಳೆಯಲು ಬಿಡಬಾರದು. ತಕ್ಕ ಪಾಠ ಕಲಿಸಬೇಕು. ಸ್ವಾಭಿಮಾನ ಇಲ್ಲದ ದುಡ್ಡಿಗೋಸ್ಕರ ಮಾಡಿಕೊಳ್ಳುವಂತಹ ರಾಜಕಾರಣಿಗಳಿಗೆ ಅವಕಾಶ ನೀಡಬಾರದು' ಎಂದರು.

'ಅಗತ್ಯವಸ್ತುಗಳ ಬೆಲೆ, ಇಂಧನ ಬೆಲೆ ಹಾಗೂ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಇಂತಹ ಸಂದರ್ಭದಲ್ಲಿ ಬಡವರು ಬದುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಎಲ್ಲ ಜನರ ಪಕ್ಷವಾಗಿದ್ದು, ಬಸನಗೌಡ ಅವರನ್ನು ಆಯ್ಕೆಗೊಳಿಸಿ' ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ’ಬಸನಗೌಡ ತುರ್ವಿಹಾಳ ಅವರನ್ನು ಆಯ್ಕೆಮಾಡಿ ವಿಧಾನಸೌಧಕ್ಕೆ ಕಳಿಸಬೇಕು. ಪ್ರತಾಪಗೌಡ ಅವರು ಜರನ್ನು ಕೇಳಿ ರಾಜೀನಾಮೆ ಕೊಟ್ಟಿಲ್ಲ. ಬಿಜೆಪಿಯವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ದೇಶದ ಶಕ್ತಿ ಕಾಂಗ್ರೆಸ್ ಪಕ್ಷ. 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ‌ಬರಲಿದೆ’ ಎಂದರು.

ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಪ್ರತಾಪಗೌಡ ಪಾಟೀಲ ಅವರು ಹಿಂದಿನ ಚುನಾವಣೆಯಲ್ಲಿ ಸೋಲಬೇಕಾಗಿತ್ತು. ಕ್ಷೇತ್ರದ ಮತದಾರರು ಅರ್ಥಮಾಡಿಕೊಳ್ಳಬೇಕು ಮೋಸ ಮಾಡುವ ಜನರನ್ನು ನಂಬಬಾರದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಅನುಭವ ಮಂಟಪ ದಂತಿದೆ. ಎಲ್ಲ ಜಾತಿ ಧರ್ಮದವರು ಪಕ್ಷದಲ್ಲಿದ್ದಾರೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಕೆಲಸವನ್ನು ಬದ್ಧತೆಯಿಂದ ಮಾಡಿಕೊಂಡು ಬಂದಿರುವ ಪಕ್ಷ ಇದಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಮಾತನಾಡಿ, ಈ ಚುನಾವಣೆಯಲ್ಲಿ ಎಲ್ಲರೂ ಆಶೀರ್ವಾದ ಮಾಡಿ. ಜನರಿಗೆ ದುಡ್ಡುಕೊಟ್ಟು ವಾಪಸ್ ಪಡೆದಿದ್ದೇನೆ ಎನ್ನುವ ಆರೋಪ ಮಾಡಿರುವ ಪ್ರತಾಪಗೌಡ ಅವರಿಗೆ ನಾಚಿಕೆ ಆಗಬೇಕು. 5ಎ ಕಾಲುವೆ ಭಾಗದ ರೈತರು ನಿಮಗೆ ಮತ‌ನೀಡಲ್ಲವೆ? ಅವರ ಸಂಕಷ್ಟ ಆಲಿಸುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ ಪಕ್ಷ ಎಂದರು.

ಎಐಸಿಸಿ ಕಾರ್ಯದರ್ಶಿ ಎನ್. ಎಸ್. ಬೋಸರಾಜು, ಮುಖಂಡ ಕರಿಯಪ್ಪ, ಹಂಪನಗೌಡ ಬಾದರ್ಲಿ ಸೇರಿ ಅನೇಕರು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ.ನಾಯಕ, ಶಾಸಕರಾದ ಬಸನಗೌಡ ದದ್ದಲ, ಡಿ.ಎಸ್‌.ಹುಲಗೇರಿ, ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.