ADVERTISEMENT

ಸಿಂಧನೂರು: ಜೋಳ ಖರೀದಿಸಿ ಐದು ತಿಂಗಳಾದರೂ ಕೆಲವು ರೈತರಿಗೆ ಪಾವತಿಯಾಗದ ಹಣ

ಡಿ.ಎಚ್.ಕಂಬಳಿ
Published 26 ಜುಲೈ 2025, 7:49 IST
Last Updated 26 ಜುಲೈ 2025, 7:49 IST
ಬೈರೇಗೌಡ ಹಿರೇಬೇರ್ಗಿ
ಬೈರೇಗೌಡ ಹಿರೇಬೇರ್ಗಿ   

ಸಿಂಧನೂರು: ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಮುಂಗಾರು ಜೋಳ, ಮೇ-ಜೂನ್‍ನಲ್ಲಿ ಹಿಂಗಾರು ಜೋಳವನ್ನು ಖರೀದಿ ಕೇಂದ್ರದಿಂದ ಖರೀದಿ ಮಾಡಲಾಗಿದೆ. ಆದರೆ ಕೆಲ ರೈತರ ಮುಂಗಾರು ಜೋಳದ ಹಣವನ್ನು ಪಾವತಿಸಿಲ್ಲ. ಹಿಂಗಾರು ಜೋಳದ ಹಣವೂ ಪಾವತಿಯಾಗದಿರುವ ಬಗ್ಗೆ ರೈತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಡಿಸೆಂಬರ್ ತಿಂಗಳಲ್ಲಿ ಜೋಳ ಕೊಯ್ಲಿಗೆ ಬಂದಿದ್ದರೂ ಖರೀದಿ ಕೇಂದ್ರಗಳನ್ನು ಆರಂಭಿಸಲಿಲ್ಲ. ಫೆಬ್ರುವರಿ ಕೊನೆಯಲ್ಲಿ ಹಿಂಗಾರು ಜೋಳ ಕೈಗೆ ಬಂದರೂ ಮುಂಗಾರು ಜೋಳದ ಖರೀದಿ ಕೇಂದ್ರವು ಆರಂಭವಾಗಿರಲಿಲ್ಲ. ರೈತ ಸಂಘದ ಹಲವಾರು ಬಣಗಳು, ಸಂಘಟನೆಗಳು, ಹೋರಾಟ ಮಾಡಿದ ನಂತರ ಮಾರ್ಚ್ 15 ರಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಯಿತು. ಆದರೆ ಹಿಂಗಾರು ಜೋಳ ಮಾತ್ರ ರೈತರ ಮನೆಯಲ್ಲಿಯೆ ಉಳಿದುಕೊಂಡವು ಎಂದು ಭೇರ್ಗಿ ಗ್ರಾಮದ ರೈತರಾದ ಚನ್ನಬಸವ, ಸೂರಪ್ಪ ಮಾಡಸಿರವಾರ ಮತ್ತಿತರರು ತಮ್ಮ ಅಳಲು ತೋಡಿಕೊಂಡರು.

ಮೇ ತಿಂಗಳ ಕೊನೆಯಲ್ಲಿ ಹಿಂಗಾರು ಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡಿದರು. ಆದರೆ ಜೋಳಕ್ಕೆ ನುಷಿ ಮತ್ತು ಹುಳ ಬಂದಿವೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಜೋಳ ಖರೀದಿ ಮಾಡದೆ ತಿರಸ್ಕರಿಸಿದರು. ಇದರಿಂದ ರೊಚ್ಚಿಗೆದ್ದ ರೈತರು ವಾರಗಟ್ಟಲೆ ತಹಶೀಲ್ದಾರ್ ಕಚೇರಿಯ ಮುಖ್ಯದ್ವಾರದಲ್ಲಿಯೇ ಜೋಳದ ಚೀಲ ತುಂಬಿದ ಲಾರಿಗಳನ್ನು ಮುಖ್ಯದ್ವಾರದಲ್ಲಿ ನಿಲ್ಲಿಸಿ ಪ್ರತಿಭಟನೆ ಮಾಡಿದ ನಂತರ ರಾಜ್ಯ ಸರ್ಕಾರ ಹಲವು ನಿಯಮಗಳನ್ನು ಸಡಿಲಗೊಳಿಸಿ ಹಿಂಗಾರು ಜೋಳ ಖರೀದಿ ಮಾಡಲಾಗಿದೆ.

ADVERTISEMENT

ಮೇ ಮತ್ತು ಜೂನ್ ತಿಂಗಳಲ್ಲಿ ಹಿಂಗಾರು ಜೋಳ ಖರೀದಿ ಮಾಡಿದ್ದರೂ ಇಲ್ಲಿಯವರೆಗೆ ಹಣ ಪಾವತಿಸಿದ ಕಾರಣ ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಜೋಳ ಬೆಳೆಯಲು ಜೋಳದ ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಜೋಳವನ್ನು ಖರೀದಿ ಕೇಂದ್ರಕ್ಕೆ ತಂದು ಹಾಕಲು ಬೇಕಾದ ಖರ್ಚನ್ನು ಸಾಲ ಮಾಡಿ ಭರಿಸಿದ್ದೇವೆ. ಸರ್ಕಾರ ನಮ್ಮ ಖಾತೆಗಳಿಗೆ ಹಣ ಪಾವತಿಸುತ್ತಿದೆ ಎಂದು ಪ್ರತಿನಿತ್ಯ ಸಾಲಗಾರರಿಗೆ ಸುಳ್ಳು ಹೇಳಿ ಕಾಲ ನೂಕುತ್ತಿದ್ದೇವೆ ಎಂದು ಮಾಡಸಿರವಾರ ಗ್ರಾಮದ ಕರಿಯಪ್ಪ, ಬೆಳಗುರ್ಕಿಯ ನಿಂಗಪ್ಪ, ಹುಚ್ಚಮ್ಮ ಚಿರತ್ನಾಳ, ಶರಣಮ್ಮ ಜವಳಗೇರಾ ಸರ್ಕಾರದ ಉದಾಸೀನತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೋಳ ಬೆಳೆದ ರೈತರು ಹಲವು ತಿಂಗಳು ಗತಿಸಿದರೂ ಹಣ ಪಾವತಿಸದ ಕಾರಣಕ್ಕೆ ನೊಂದಿದ್ದಾರೆ. ಇನ್ನೂ ತಾಳ್ಮೆ ಪರೀಕ್ಷೆ ಮಾಡದೆ ಹಣ ಬಿಡುಗಡೆ ಮಾಡಬೇಕೆಂದು ರಾಜ್ಯ ರೈತ ಸಂಘದ ಮುಖಂಡರಾದ ಅಮೀನಪಾಷಾ ದಿದ್ದಗಿ ಮತ್ತು ಶರಣಪ್ಪ ಮರಳಿ ಒತ್ತಾಯಿಸಿದ್ದಾರೆ.

ಬಸವರಾಜ ಮಾಡಸಿರವಾರ
ಹಿಂಗಾರು ಹಂಗಾಮಿನಲ್ಲಿ 5.5 ಲಕ್ಷ ಕ್ವಿಂಟಲ್ ಜೋಳ ಖರೀದಿಸಲಾಗಿದೆ. ₹ 218 ಕೋಟಿ ಪಾವತಿ ಮಾಡಬೇಕಾಗಿದೆ. ಮುಂದಿನ ವಾರ ಸರ್ಕಾರ ಹಣ ಬಿಡುಗಡೆ ಮಾಡಲಿದೆ
ಕೃಷ್ಣ ಶಾಲಿನೂರು ಉಪನಿರ್ದೇಶಕ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ
ಹಿಂಗಾರು ಜೋಳ ಮಾರಾಟ ಮಾಡಿದ ಹಣವನ್ನು ಸರ್ಕಾರ ಪಾವತಿ ಮಾಡದಿರುವ ಕಾರಣ ಈಗ ತೊಗರಿ ಬೆಳೆ ಹಾಕಿದ್ದೇವೆ. ಅದಕ್ಕೆ ಗೊಬ್ಬರ ಕ್ರಿಮಿನಾಶಕ ಹಾಕಲು ನಯಾಪೈಸೆ ಇಲ್ಲದಂತಾಗಿದೆ
ಬೈರೆಗೌಡ ಹಿರೇಬೇರ್ಗಿ
ಪ್ರತಿಯೊಂದಕ್ಕೂ ಹೋರಾಟ ಮಾಡಬೇಕೆಂದರೆ ನಾವು ಒಕ್ಕಲುತನ ಯಾವಾಗ ಮಾಡಬೇಕು. ಬೆಂಬಲ ಬೆಲೆಗೆ ಖರೀದಿ ಮಾಡುತ್ತಿರುವುದು ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ
ಬಸವರಾಜ ಮಾಡಸಿರವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.