ಸಿಂಧನೂರು ನಗರಕ್ಕೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮಂಜೂರಾಗಿರುವ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಿಕಾಂತ ಹಾಗೂ ರಾಜಕುಮಾರ ಭೇಟಿ ನೀಡಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಸ್ಥಳ ವೀಕ್ಷಣೆ ಮಾಡಿದರು
ಸಿಂಧನೂರು: ನಗರಕ್ಕೆ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಮಂಜೂರಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಗುರುವಾರ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಿಕಾಂತ ಹಾಗೂ ರಾಜಕುಮಾರ ಭೇಟಿ ನೀಡಿ ಶಾಸಕ ಹಂಪನಗೌಡ ಬಾದರ್ಲಿ ಅವರೊಂದಿಗೆ ಸ್ಥಳ ವೀಕ್ಷಣೆ ಮಾಡಿದರು.
ಈ ವೇಳೆ ಶಾಸಕ ಬಾದರ್ಲಿ ಮಾತನಾಡಿ, ‘ಪಿಡಬ್ಲ್ಯೂಡಿ ಕ್ಯಾಂಪ್ನ ನೀರಾವರಿ ಇಲಾಖೆಯ 6 ಎಕರೆ ಜಾಗದಲ್ಲಿ ಜಿಟಿಟಿಸಿ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಕೆಕೆಆರ್ಡಿಬಿ ವತಿಯಿಂದ ₹60 ಕೋಟಿ ಅನುದಾನ ಮಂಜೂರಾಗಿದೆ. ಈ ಕಟ್ಟಡ ನಿರ್ಮಾಣ ಆಗುವವರೆಗೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ತಾತ್ಕಾಲಿಕವಾಗಿ ನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ನಾಲ್ಕು ಕೊಠಡಿಗಳಲ್ಲಿ ತರಗತಿಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.
ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಿಕಾಂತ ಮಾತನಾಡಿ, ‘ಪ್ರಸ್ತುತ ಸಾಲಿನಿಂದ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್, ಫೈನಾನ್ಸ್, ರಿಟೈಲ್, ಎಲೆಕ್ಟ್ರಿಕಲ್, ವೈಡಿಂಗ್, ಐಟಿಐ ಟೆಕ್ನಿಷಿಯನ್, ಅಗ್ರಿಕಲ್ಚರ್ ಕೋರ್ಸ್ ಆರಂಭಿಸಲಾಗುವುದು. ಡಿಪ್ಲೋಮಾ ತರಬೇತಿಗಳನ್ನು ನೂತನ ಕಟ್ಟಡದಲ್ಲಿ ನಿರಂತರವಾಗಿ ನಡೆಸಲಾಗುವುದು. ನೂತನ ಕಟ್ಟಡ ಮತ್ತು ತಾತ್ಕಾಲಿಕ ಕಟ್ಟಡದ ಸ್ಥಳ ಪರಿಶೀಲಿಸಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜತೆ ಅಗತ್ಯ ಮೂಲಸೌಕರ್ಯಗಳನ್ನು ಆದಷ್ಟು ತೀವ್ರಗತಿಯಲ್ಲಿ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಪ್ರಭಾರಿ ತಹಶೀಲ್ದಾರ್ ಶೃತಿ ಕೆ, ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್, ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಲಕ್ಷ್ಮಿದೇವಿ, ನಗರಸಭೆ ಮಾಜಿ ಸದಸ್ಯ ಪ್ರಭುರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.