ಸಿಂಧನೂರಿನ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಕಾಮಗಾರಿ ಆರಂಭಗೊಳ್ಳದೆ
ನನೆಗುದಿಗೆ ಬಿದ್ದಿರುವುದು
ಸಿಂಧನೂರು: ಸಿಂಧನೂರಿಗೆ ರೈಲ್ವೆ ಸಂಚಾರ ಮಾರ್ಗದ ಸೌಕರ್ಯ ಲಭಿಸಿರುವುದು ಇಲ್ಲಿನ ಜನರಿಗೆ ಸಂತಸ ತಂದಿದೆ. ಆದರೆ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಹೋಗಬೇಕಾದರೆ ತೀವ್ರ ಪ್ರಯಾಸ ಪಡಬೇಕಾಗಿದೆ.
ಸಂಗಣ್ಣ ಕರಡಿ ಅವರು ಕೊಪ್ಪಳ ಸಂಸದರಾಗಿದ್ದಾಗ ರಾಯಚೂರು-ಗಂಗಾವತಿ ಮುಖ್ಯ ರಸ್ತೆಯಿಂದ ರೈಲ್ವೆ ನಿಲ್ದಾಣದವರೆಗೆ 1.7 ಕಿ.ಮೀವರೆಗೆ ಸಿಸಿ ರಸ್ತೆ ನಿರ್ಮಾಣಕ್ಕೆ ಜಲಸಂಪನ್ಮೂಲ ಇಲಾಖೆಯಿಂದ ಹಣ ಮಂಜೂರು ಮಾಡಿ ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್ ಪ್ರಕ್ರಿಯೆಯಿಂದ ಕಡತ ಮುಂದೆ ಹೋಗದ ಕಾರಣ ಕಾಮಗಾರಿ ಆರಂಭವಾಗಿರಲಿಲ್ಲ. ಎಂಟು ತಿಂಗಳ ಹಿಂದೆ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ಹಂಪನಗೌಡ ಬಾದರ್ಲಿ ಹಾಗೂ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಮತ್ತಿತರ ಮುಖಂಡರು ಸೇರಿ ನೀರಾವರಿ ಇಲಾಖೆಯ ₹8.50 ಕೋಟಿ ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆರಂಭದಲ್ಲಿ ರಸ್ತೆ ಅಗೆದು ವಿಸ್ತರಣೆ ಮಾಡಲಾಯಿತು. ತದನಂತರ ಗುತ್ತಿಗೆ ಪಡೆಯುವ ವಿಚಾರದಲ್ಲಿ ಒಳಜಗಳ ಉಂಟಾಗಿ ಇಂದಿಗೂ ಸಹ ಕಾಮಗಾರಿ ನಿಂತಲ್ಲೇ ನಿಂತಿದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಹಂಪನಗೌಡ ಬಾದರ್ಲಿ ಅವರು ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡುವ ಉದ್ದೇಶದಿಂದ ಕೆಲಸ ಸ್ಥಗಿತಗೊಳಿಸಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಹಣವನ್ನು ಈ ಕೆಲಸಕ್ಕೆ ಕೊಡಲು ನಿಯಮದಲ್ಲಿ ಅವಕಾಶ ಇಲ್ಲವೆಂದು ಲಿಂಗಸುಗೂರು ಉಪವಿಭಾಗಾಧಿಕಾರಿ ನಿರಾಕರಿಸಿದರು. ಈ ಸಂಗತಿಯು ಸಹ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎನ್ನುವುದು ಬಿಜೆಪಿ ಮುಖಂಡರ ಆರೋಪವಾಗಿದೆ.
ರೈಲ್ವೆ ಮಾರ್ಗದ ಸೌಕರ್ಯ ಲಭಿಸಿರುವುದರಿಂದ ಬೆಂಗಳೂರು, ಹುಬ್ಬಳ್ಳಿ ಮತ್ತಿತರ ಪಟ್ಟಣಗಳಿಗೆ ಹೋಗಬೇಕಾದ ಪ್ರಯಾಣಿಕರಿಗೆ ಅತ್ಯಂತ ಅನುಕೂಲವಾಗಿದೆ. ಆದರೆ ನಗರದಿಂದ ರೈಲ್ವೆ ನಿಲ್ದಾಣಕ್ಕೆ ಬೈಕ್, ಆಟೊದಲ್ಲಿ ಹೋಗಬೇಕಾದರೆ ತಕಧಿಮಿತ ನೃತ್ಯ ಮಾಡುವ ಮೂಲಕ ತೆರಳಬೇಕಾದ ಪರಿಸ್ಥಿತಿಯಿದೆ. ಯಾವಾಗ ವಾಹನಗಳು ಪಲ್ಟಿ ಆಗುತ್ತವೆಯೋ ಎಂಬ ಭಯ ಕಾಡುತ್ತಿದೆ ಎಂದು ಶರಣಯ್ಯಸ್ವಾಮಿ, ಮಹಿಬೂಬ್ ಗೋಮರ್ಸಿ, ಅಕ್ಕಮಹಾದೇವಿ, ಲಕ್ಷ್ಮಿದೇವಿ ಆತಂಕ ವ್ಯಕ್ತಪಡಿಸಿದ್ದಾರೆ.
‘ಕಾರಣಾಂತರಗಳಿಂದ ಗುತ್ತಿಗೆದಾರರಿಗೆ ಕೆಲಸದ ಆದೇಶ ಆಗಿರಲಿಲ್ಲ. ಇದರಿಂದ ಕೆಲಸ ಕೈಗೆತ್ತಿಕೊಳ್ಳಲು ತಡವಾಯಿತು. ನಂತರ ಭೂಮಿಪೂಜೆ ನೆರವೇರಿಸಿ ಮಸ್ಕಿ ತಾಲ್ಲೂಕಿನ ಶಿವಕುಮಾರ ಎಂಬುವವರಿಗೆ ಗುತ್ತಿಗೆ ವಹಿಸಿಕೊಟ್ಟಿದ್ದು, ಅವರು ಕೆಲ ದಿನಗಳ ಕಾಲ ಕೆಲಸ ಸ್ಥಗಿತಗೊಳಿಸಿದ್ದರು. ನೋಟಿಸ್ ನೀಡಿದ ನಂತರ ಕೆಲಸ ಪ್ರಾರಂಭಿಸಿದ್ದಾರೆ. ಇನ್ನು ಮುಂದೆ ತ್ವರಿತವಾಗಿ ಕೆಲಸ ಮುಗಿಸುವಂತೆ ಸೂಚಿಸಲಾಗಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ಸಿಂಧನೂರು ಉಪವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸತ್ಯನಾರಾಯಣ ಶೆಟ್ಟಿ ಪ್ರತಿಕ್ರಿಯಿಸಿದರು.
ವಿದ್ಯುತ್ ಕಂಬಗಳ ಸ್ಥಳಾಂತರ, ಗುತ್ತಿಗೆದಾರರ ವಿಳಂಬ ನೀತಿಯಿಂದ ರೈಲ್ವೆ ನಿಲ್ದಾಣಕ್ಕೆ ತೆರಳುವ ಸಿಸಿರಸ್ತೆ ಕಾಮಗಾರಿ ವಿಳಂಬವಾಗಿತ್ತು. ಇನ್ನು ಮುಂದೆ ತ್ವರಿತವಾಗಿ ಕೆಲಸ ನಡೆಯಲಿದೆಸತ್ಯನಾರಾಯಣ ಶೆಟ್ಟಿ, ಕಾರ್ಯಪಾಲಕ ಎಂಜಿನಿಯರ್, ಜಲಸಂಪನ್ಮೂಲ ಇಲಾಖೆ
ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ಜನಪ್ರತಿನಿಧಿಗಳು ಕಾಳಜಿ ತೋರದ ಕಾರಣ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆಡಾ.ವಸೀಂ ಅಹ್ಮದ್, ಮಹೆಬೂಬಿಯಾ ಕಾಲೊನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.