ರಾಯಚೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರ ಜನ್ಮ ದಿನದ ನಿಮಿತ್ತ ಬುಧವಾರ ಪೊಲೀಸ್ ಇಲಾಖೆಯ ಆವರಣದಲ್ಲಿ ರಕ್ತದಾನ ಶಿಬಿರ, ರಸ್ತೆಗಳಲ್ಲಿ ಗುಂಡಿ ಮುಚ್ಚುವುದು ಹಾಗೂ ನಿರಾಶ್ರಿತರ ಕೇಂದ್ರದಲ್ಲಿ ಅನ್ನಸಂತರ್ಪಣೆ, ಹಣ್ಣು ಹಂಪಲ ವಿತರಣೆ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸ್ವತಃ ಡಾ.ಸಿ.ಬಿ.ವೇದಮೂರ್ತಿ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 52 ಜನರು ರಕ್ತದಾನ ಮಾಡಿದರು. ರಿಮ್ಸ್ ಬೋಧಕ ಆಸ್ಪತ್ರೆ ಮತ್ತು ರಕ್ತ ಭಂಡಾರ ಸಿಬ್ಬಂದಿ ಪಾಲ್ಗೊಂಡು ಶಿಬಿರ ಯಶಸ್ವಿಗೊಳಿಸಿದರು.
ನಿರಾಶ್ರಿತರ ಕೇಂದ್ರದಲ್ಲಿ ನಿರ್ಗತಿಕರೊಂದಿಗೆ ಆಹಾರ ಸೇವಿಸಿದ ವೇದಮೂರ್ತಿ ಅವರು, ಹಣ್ಣು–ಹಂಪಲು ವಿತರಿಸಿದರು. ಸಂಚಾರಿ ಠಾಣೆ ಪೊಲೀಸರು ನಗರದ ರಸ್ತೆಗಳಲ್ಲಿ ಮರಂ ಹಾಕಿ ಗುಂಡಿಗಳನ್ನು ಮುಚ್ಚಿದರು. ನಗರದ ಹಲವು ಸಂಘ–ಸಂಸ್ಥೆಗಳು ಕೇಕ್ ಕತ್ತರಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಜನ್ಮದಿನ ಆಚರಿಸಿದ್ದು ವಿಶೇಷವಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಗೆ ಬಂದ ನಂತರ ಡಾ.ಸಿ.ಬಿ. ವೇದಮೂರ್ತಿ ಅವರು ಜನರೊಂದಿಗೆ ಬೆರೆಯುವುದರೊಂದಿಗೆ ಕೆಲವೇ ದಿನಗಳಲ್ಲಿ ಸಾಕಷ್ಟು ಮನ್ನಣೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.