ಮಸ್ಕಿ: ಹೆದ್ದಾರಿ ಮೇಲೆ ನಿಂತು ವಾಹನ ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಬಿಡಾಡಿ ದನಗಳನ್ನು ಪುರಸಭೆ ಆಡಳಿತ ಕಾರ್ಯಚರಣೆ ನಡೆಸಿ ಸ್ಥಳಾಂತರ ಮಾಡಿತು.
ಶುಕ್ರವಾರ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ 30ಕ್ಕೂ ಹೆಚ್ಚು ದನಗಳನ್ನು ಹಿಡಿದು ಗಚ್ಚಿನಮಠದಲ್ಲಿ ಹಾಕಿ ನಂತರ ಅವುಗಳನ್ನು ಲಾರಿ ಮೂಲಕ ಮುದಗಲ್ ಪಟ್ಟಣದ ಗೋ ಶಾಲೆಗೆ ಸ್ಥಳಾಂತರಿಸಿದರು. ಪುರಸಭೆ ಸಿಬ್ಬಂದಿ ಜತೆ ರಾಕೇಶ ಪಾಟೀಲ ನೇತೃತ್ವದ ಗೋ ರಕ್ಷಣೆ ಪಡೆಯ ಯುವಕರು ಹಾಗೂ ಪೊಲೀಸ ಸಿಬ್ಬಂದಿ ಸಹ ದನಗಳನ್ನು ಗೋ ಶಾಲೆಗೆ ಸೇರಿಸುವಲ್ಲಿ ಕೈ ಜೋಡಿಸಿದರು.
‘ಹೆದ್ದಾರಿ ಮೇಲೆ ಹೆಚ್ಚಿದ ಬಿಡಾಡಿ ದನ-ಸಾರ್ವಜನಿಕರ ಆಕ್ರೋಶ’ ಕುರಿತು ಪ್ರಜಾವಾಣಿಯಲ್ಲಿ ಈಚೆಗೆ ವರದಿ ಪ್ರಕಟವಾಗಿತ್ತು. ಹೊಸದಾಗಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಲ್ಲಯ್ಯ ಅಂಬಾಡಿ ಎರಡು ದಿನಗಳಲ್ಲಿ ಬಿಡಾಡಿ ದನಗಳ ಹಾವಳಿ ತಪ್ಪಿಸುವ ಭರವಸೆಯನ್ನು ಸುದ್ದಿಗೋಷ್ಠಿಯಲ್ಲಿ ನೀಡಿದ್ದರು.
ದನಗಳನ್ನು ರಸ್ತೆಗಳ ಮೇಲೆ ಬಿಡದಂತೆ ದನಗಳ ಮಾಲೀಕರಿಗೆ ನೋಟೀಸ್ ನೀಡಲಾಗಿದೆ. ಡಂಗುರ ಸಾರಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ. ಪುನಃ ರಸ್ತೆಗೆ ದನಕರುಗಳು ಬಂದರೆ ಬೇರೆ ಬೇರೆ ಜಿಲ್ಲೆಗಳಿಗೆ ಅವುಗಳನ್ನು ಸ್ಥಳಾಂತರ ಮಾಡುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.