ADVERTISEMENT

ಸಿಇಟಿ ಪರೀಕ್ಷಾ ಪ್ರಶ್ನೆ ಪತ್ರಿಕೆ : ವಿದ್ಯಾರ್ಥಿಗಳಿಗೆ ಗೊಂದಲ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 15:49 IST
Last Updated 19 ಏಪ್ರಿಲ್ 2024, 15:49 IST
<div class="paragraphs"><p>ಸಾಂದರ್ಭಿಕ&nbsp; ಚಿತ್ರ</p></div>

ಸಾಂದರ್ಭಿಕ  ಚಿತ್ರ

   

ರಾಯಚೂರು: ನಗರದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ರಸಾಯನವಿಜ್ಞಾನ ಹಾಗೂ ಭೌತವಿಜ್ಞಾನ ಪರೀಕ್ಷೆಗಳು ನಡೆದವು. ನಿಗದಿತ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳಿಂದಾಗಿ ಆತಂಕಕ್ಕೆ ಒಳಗಾದರು.

ಪರೀಕ್ಷೆ ನಂತರ ಪ್ರತಿಕ್ರಿಯಿಸಿದ ಹಲವು ವಿದ್ಯಾರ್ಥಿಗಳು, 'ರಸಾಯನ ಶಾಸ್ತ್ರ ವಿಷಯದಲ್ಲಿ ಆರು ಮತ್ತು ಭೌತಶಾಸ್ತ್ರ ವಿಷಯದಲ್ಲಿ ಐದು ಪ್ರಶ್ನೆಗಳು ಪರೀಕ್ಷೆಗೆ ನಿಗದಿತ ಪಠ್ಯಕ್ರಮದಿಂದ ಹೊರತಾಗಿದ್ದವು' ಎಂದು ದೂರಿದರು.

ADVERTISEMENT

ಪ್ರವೇಶ ಪತ್ರದಲ್ಲಿ ನಮೂದಿಸಲಾದ ಪರೀಕ್ಷಾ ಕೇಂದ್ರಗಳ ವಿಳಾಸ ಗೊಂದಲದಿಂದಾಗಿ ಪರೀಕ್ಷಾ ಕೇಂದ್ರವನ್ನು ಪತ್ತೆ ಹಚ್ಚಲು ಪರದಾಡಬೇಕಾಯಿತು ಎಂದು ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕೆಲ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಕೆಲವು ಪಾಲಕರು ಮಾತನಾಡಿ, 'ಮುಂದಿನ ಬಾರಿ ತಾಲ್ಲೂಕು ಕೇಂದ್ರಗಳಲ್ಲಿಯೂ ಸಿಇಟಿ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಕಲ್ಪಿಸಬೇಕು. ಸಿಇಟಿ ಪರೀಕ್ಷೆಗಾಗಿ ದೂರದ ಲಿಂಗಸೂಗುರು, ಮುದಗಲ್ ಭಾಗದ ಗ್ರಾಮಗಳಿಂದ ನಿತ್ಯ ರಾಯಚೂರು ಜಿಲ್ಲಾ ಕೇಂದ್ರಕ್ಕೆ ಬರಲು ತೊಂದರೆಯಾಗುತ್ತಿದೆ. ಸಾರಿಗೆ ಬಸ್‌ಗಳ ಕೊರತೆಯಿಂದ ‌ನಿಗದಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದರು.

ಒಎಂಆರ್ ಶೀಟ್ ಗೊಂದಲ: ಡಿಡಿಪಿಯು ಭೇಟಿ

ರಾಯಚೂರಿನ ನಗರದ ಟ್ಯಾಗೋರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ವಿಷಯದ ಒಎಂಆರ್ ಶೀಟ್ ಬದಲಾವಣೆಯಾಗಿ ಗೊಂದಲ ಉಂಟಾಯಿತು. ಕೊಠಡಿ ಮೇಲ್ವಿಚಾರಕರು ಒಎಂ ಆರ್ ಶೀಟ್ ಹಂಚುವಾಗ ಒಬ್ಬ ಅಭ್ಯರ್ಥಿಗೆ ಎರಡು ಅಂಟಿಕೊಂಡ ಒಎಂಆರ್ ಶೀಟ್ ಹಂಚಿದ್ದಾರೆ. ಎಲ್ಲರಿಗೂ ಹಂಚಿದಾಗ ಒಂದು ಒಎಂಆರ್ ಶೀಟಿನಲ್ಲಿ ಅಭ್ಯರ್ಥಿ ನೋಂದಣೆ ಸಂಖ್ಯೆ ಇತರೆ ವಿವರ ತುಂಬಿದ್ದರು. ನಂತರ ಕೊಠಡಿ ಮೇಲ್ವಿಚಾರಿಗೆ ಸತ್ಯ ಗೊತ್ತಾದ ನಂತರ ತಪ್ಪಾಗಿ ಬರೆದ ಅಭ್ಯರ್ಥಿಯಿಂದ ಮರಳಿ ಪಡೆದು ಸರಿಪಡಿಸಿಕೊಂಡಿದ್ದಾರೆ.

ಆದರೆ ಶುಕ್ರವಾರ ತಪ್ಪಾದ ಒಎಂಆರ್ ಶೀಟ್ ನಲ್ಲಿ ಬರೆದ ಅಭ್ಯರ್ಥಿ ಪಾಲಕರ‌ ಜೊತೆಗೆ ಆಗಮಿಸಿ ಗೊಂದಲದಿಂದ ಸಮಸ್ಯೆಯಾಗಬಾರದು ಎಂದು ಹೇಳಿದಾಗ ಸ್ಥಳಕ್ಕೆ ಡಿಡಿಪಿಯು ಸೋಮಶೇಖರಪ್ಪ ಹೊಕ್ರಾಣಿ ಭೇಟಿ ನೀಡಿ ಕೊಠಡಿ ಮೇಲ್ವಿಚಾರಕರಿಂದ ಹಿಂಬರಹ ಬರೆದುಕೊಂಡು ಬೋರ್ಡ್ ಜೊತೆ ಮಾತನಾಡಿ ಗೊಂದಲ ಸರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.