ADVERTISEMENT

ಕಾಯ್ದೆಯಲ್ಲಿ ಸುಧಾರಣೆ ತರಲು ಆಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 13:07 IST
Last Updated 3 ಜನವರಿ 2019, 13:07 IST

ರಾಯಚೂರು: ಜನಪ್ರತಿನಿಧಿಗಳ ಕಾಯ್ದೆ– 1950, 1951 ಮತ್ತು ಸಂಬಂಧಿತ ಕಾನೂನು ಹಲವಾರು ಲೋಪದೋಷಗಳಿದ್ದು, ಸುಧಾರಣೆಗಾಗಿ ಪ್ರಮುಖವಾದ ಆರು ಸಲಹೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ಪಾಟೀಲ ಆಲ್ಕೋಡ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಮತದಾರರ ಪಟ್ಟಿಯನ್ನು ಪ್ರತಿವರ್ಷ ಕಡ್ಡಾಯವಾಗಿ ಪರಿಷ್ಕರಣೆ ಮಾಡಲು ಅವಧಿ ನಿಗದಿಪಡಿಸಬೇಕು. ಮತದಾರರ ಪಟ್ಟಿ ಲೋಪ ಸರಿಪಡಿಸಿದರೆ ಅರ್ಧ ಯಶಸ್ಸು ದೊರೆತಂತೆ ಎಂದರು.

ಮತದಾರರ ಹೆಸರುಗಳು ಒಂದುಕಡೆ ಮಾತ್ರ ನೋಂದಣಿ ಇರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮತ್ತು ಬೋಗಸ್ ಮತದಾರರ ಹೆಸರು ಕೈಬಿಡಲು ಆಧಾರ ನಂಬರ್ ಜೋಡಣೆ ಮಾಡಬೇಕು. ಚುನಾವಣೆಗಳನ್ನು ಕೈಗೊಳ್ಳಲು ಪ್ರತಿ ವರ್ಷ ನಿರ್ದಿಷ್ಟ ಅವಧಿ ನಿಗದಿ ಪಡಿಸಬೇಕು ಎಂದು ತಿಳಿಸಿದರು.

ADVERTISEMENT

ಲೋಕಸಭಾ ಚುನಾವಣೆಯ ಪ್ರಚಾರದ ಅವಧಿಯನ್ನು ಪರಿಷ್ಕರಿಸಿ ನಿಗದಿ ಪಡಿಸಬೇಕು. ವಿಧಾನಸಭಾ ಚುನಾವಣೆಗೆ 14 ದಿನಗಳ ಪ್ರಚಾರದ ಅವಧಿ ಸಾಕಾಗಲಿದ್ದು, ಲೋಕಸಭೆಗೆ 28 ದಿನ ನಿಗದಿಪಡಿಸಬೇಕು. ಚುನಾವಣೆಗೆ ಮತಯಂತ್ರಗಳನ್ನು ಬಳಕೆ ಮಾಡುವುದರಿಂದ ಮತಎಣಿಕೆ ತ್ವರಿತವಾಗಿ ನಡೆಯಲಿದ್ದು, ಬೆಳಿಗ್ಗೆ 8ಗಂಟೆ ಬದಲಿಗೆ 11ಗಂಟೆಗೆ ಮತಎಣಿಕೆ ಆರಂಭಿಸಲು ಕ್ರಮ ಜರುಗಿಸಬೇಕು. ಏಕ ಅಭ್ಯರ್ಥಿ ಬಹು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಆಯ್ಕೆಯಾದಲ್ಲಿ ಒಂದು ಕ್ಷೇತ್ರವನ್ನು ಉಳಿಸಿಕೊಂಡು ಉಳಿದ ಕ್ಷೇತ್ರಗಳಿಗೆ ರಾಜೀನಾಮೆ ನೀಡಿ ಉಪಚುನಾವಣೆ ನಡೆಸಬೇಕಾಗಿದೆ. ಆದ್ದರಿಂದ ಎರಡನೇ ಸ್ಥಾನ ಪಡೆದವರನ್ನು ಪರ್ಯಾಯ ಆಯ್ಕೆಗೆ ಮನ್ನಣೆ ನೀಡಲು ತಿದ್ದುಪಡಿ ತರಬೇಕು ಎಂದರು.

ಎಸ್.ಬಿ.ಕುಲಕರ್ಣಿ, ರಾಮಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.