ಹಟ್ಟಿ ಚಿನ್ನದ ಗಣಿ: ಪ್ರತಿ ವಾರ ಸಂತೆದಿನವಾದ ಭಾನುವಾರ ಕಿಕ್ಕಿರಿದು ತುಂಬಿರುತ್ತಿದ್ದ ಜನಸಂದಣಿಯು ಬಿರುಬೇಸಿಗೆ ಕಾರಣದಿಂದಾಗಿ ತುಂಬಾ ಕಡಿಮೆಯಾಗಿದೆ!
ಜನರು ಬಂದೇ ಬರುತ್ತಾರೆ ಎಂದು ತರಕಾರಿ ವ್ಯಾಪಾರಿಗಳು ನಿರಾಸೆಯಿಂದ ಬಿಸಿಲಿನ ತಾಪದಲ್ಲಿ ಕಾದು ಕುಳಿತಿರುವುದು ಕಂಡುಬಂತು. ವಾರದ ಸಂತೆ ಜನರಿಲ್ಲದೆ ಭಣ ಗುಟ್ಟುತ್ತಿತ್ತು. ತಾಪಮಾನವು 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಜನರು ಮನೆಯಿಂದ ಹೊರಬರುವುದು ಹಿಂದೇಟು ಹಾಕುವಂತಾಗಿದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದಿದ್ದ ಕೆಲವೇ ಜನರು ಬಿಸಿಲಿಗೆ ಬಸವಳಿದು ಎಳೆನೀರು, ತಂಪುಪಾನೀಯ, ಹಣ್ಣಿನ ರಸ ಕುಡಿದು ದಣಿವು ನಿವಾರಿಸಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು.
ವಾರದ ಸಂತೆಯಲ್ಲಿ ವ್ಯಾಪಾರ ಚೆನ್ನಾಗಿ ಮಾಡಿಕೊಳ್ಳಬಹುದು ಎಂದು ತರಕಾರಿ, ಹಣ್ಣುಹಂಪಲು ಹೊತ್ತು ತಂದಿದ್ದ ರೈತರು, ದಲ್ಲಾಳಿಗಳು ಪೇಚುಮೊರೆ ಹಾಕಿಕೊಂಡಿದ್ದರು.
‘ಬೆಳಿಗ್ಗೆ ತ್ವಾಟದ ಮಾಲು ತಂದು ಬಿಸಲಾಗ ಕುಂತೀವ್ರಿ. ಅವ್ಯಾಗೊಬ್ರು , ಈವಾಗೊಬ್ರು ಗಿರಾಕಿ ಬರ್ತಾರ. ಸರಿಯಾಗಿ ವ್ಯಾಪಾರ ಆಗ್ತಿಲ್ಲ. ಬಿಸಲು ಇರೊದ್ರಿಂದ ಮಂದಿ ಸಂತೀ ಕಡಿಗೇ ಬರವಲ್ರು . ಛತ್ರಿ ನೆಳ್ಳಾಗ ಕುಂತು ಮೈಯೆಂಬೋ ಮೈಯ್ಯಿ ಸುಡಕತ್ತ್ಯಾದ .ಹೊಟ್ಟಿ ತಿಪ್ಲಕ್ಕ ಫಜೀತಿ ಅನುಭವಸಂಗ ಆಗೇತಿ’ ಎಂದು ತರಕಾರಿ ವ್ಯಾಪಾರಿಯೊಬ್ಬರು ಹೇಳಿದರು.
‘ಬೆಳಿಗ್ಗೆಯಿಂದ ಗಿರಾಕಿಗಳಿಲ್ಲ ಆಗೋಬ್ಬರು ಇಗೋಬ್ಬರು ತರಕಾರಿ ಸೋಪ್ಪು ಕಾಯಿಪಲ್ಲೆ ತೆಗೆದುಕೋಳ್ಳಲು ಜನರು ಬರುತ್ತಾರೆ. ಸರಿಯಾದ ಮಳೆ ಇಲ್ಲದ ಕಾರಣ ಹೊಟ್ಟೆ ಪಾಡಿಗಾಗಿ ಉರಿ ಬಿಸಲಲ್ಲಿ ಕುಳಿತು ತರಕಾರಿ ಕಾಯಿಪಲ್ಲೇ ಮಾರುವ ಪರಿಸ್ಧಿತಿ ಎದುರಾಗಿದೆ’ ಎಂದರು ಗುಡುಗುಂಟಾ ವ್ಯಾಪಾರಸ್ಧೆ ಹನುಮವ್ವ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.