
ರಾಯಚೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ರಾಯಚೂರು ಮಹಾನಗರ ಪಾಲಿಕೆಗಳು ‘ಸ್ವಚ್ಛ ಶಹರ್ ಜೋಡಿ’ ಒಪ್ಪಂದ ಮಾಡಿಕೊಂಡಿವೆ.
ಈ ಒಪ್ಪಂದದ ಪ್ರಕಾರ ಮೈಸೂರು ಮಹಾನಗರ ಪಾಲಿಕೆಯು ಸ್ವಚ್ಛ ಸರ್ವೇಕ್ಷಣೆ ಒಡಿಎಫ್+ ಮತ್ತು ಜಿಎಫ್ಸಿ ಸ್ಟಾರ್ ರೇಟಿಂಗ್ನಲ್ಲಿ ಉತ್ತಮ ಅಂಕ ಸಾಧಿಸಲು ಮತ್ತು ಸ್ವಚ್ಛತೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ರಾಯಚೂರು ಮಹಾನಗರ ಪಾಲಿಕೆಗೆ ಸಹಕಾರ ನೀಡಲಿದೆ. ಪ್ರತಿ ಎರಡು ವಾರಗಳಿಗೊಮ್ಮೆ ದಾಖಲೆಗಳು, ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಸಾಮಗ್ರಿಗಳನ್ನು ಹಂಚಿಕೊಳ್ಳುವುದರ ಜೊತೆಗೆ ವರ್ಚುವಲ್ ಕಾನ್ಫರೆನ್ಸ್ ಮೂಲಕ ನಿಯಮಿತ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಲಾಗುವುದು. ಅದರಿಂದ ರಾಯಚೂರು ಮಹಾನಗರ ಪಾಲಿಕೆಯು ಸ್ವಚ್ಛತಾ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಹಾಯಕವಾಗಲಿದೆ.
ಎರಡು ನಗರಗಳ ನಡುವಿನ ಒಪ್ಪಂದ ಸ್ವಚ್ಛ ಭಾರತ ಮಿಷನ್ (ನಗರ) ಉದ್ದೇಶಗಳನ್ನು ಈಡೇರಿಸುವಲ್ಲಿ ಮಹತ್ವಪೂರ್ಣ ನಿರ್ಧಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ರಾಯಚೂರು ಮಹಾನಗರ ಪಾಲಿಕೆ ವಲಯ ಆಯುಕ್ತರು ಮಲ್ಲಿಕಾರ್ಜುನ ಬಿ.ಎಂ., ಅಧಿಕಾರಿಗಳಾದ ನರಸರಡ್ಡಿ ಮತ್ತು ಮೃತ್ಯುಂಜಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.