ಲಿಂಗಸುಗೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ್ದ ಮನೆಗಳನ್ನು ಕೇವಲ ಐದು ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಶರಣು ಮಂಕಣಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶಿಕ್ಷಕ ಶರಣು ಮಂಕಣಿ ಅವರಿಗೆ ತಾಲ್ಲೂಕಿನ ರಾಂಪುರ ಗ್ರಾಮದ 103 ಮನೆಗಳನ್ನು ನಿಗದಿಪಡಿಸಲಾಗಿತ್ತು. ಸೆ.23ರಂದು ಸಮೀಕ್ಷಾ ಕಾರ್ಯ ಆರಂಭಿಸಿದ ಅವರು, 103 ಮತ್ತು ಹೆಚ್ಚುವರಿ 10 ಸೇರಿ ಒಟ್ಟು 113 ಮನೆಗಳ ಸಮೀಕ್ಷೆಯನ್ನು ಸೆ.28ರಂದು ಪೂರ್ಣಗೊಳಿಸಿದ್ದಾರೆ.
ಶರಣು ಮಂಕಣಿ ಅವರನ್ನು ತಹಶೀಲ್ದಾರ್ ಸತ್ಯಮ್ಮ ಹಾಗೂ ಬಿಇಒ ಸುಜಾತ ಹೂನೂರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಶಿಕ್ಷಕ ಗುರುಮೂರ್ತಿಗೆ ಸನ್ಮಾನ
ಸಿರವಾರ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ಮುಗಿಸುವ ಮೂಲಕ ತಾಲ್ಲೂಕಿನ ಚಾಗಭಾವಿಯ ಶಿಕ್ಷಕ ಗುರುಮೂರ್ತಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೇವಲ ಐದು ದಿನಗಳಲ್ಲಿ 78 ಕುಟುಂಬಗಳ ಸಮೀಕ್ಷೆಯನ್ನು ಅವರು ಪೂರ್ಣಗೊಳಿಸಿದ್ದಾರೆ.
ತಾಲ್ಲೂಕು ಆಡಳಿತದ ವತಿಯಿಂದ ತಹಶೀಲ್ದಾರ್ ಅಶೋಕ ಪವಾರ್ ಗುಗುರುಮೂರ್ತಿ ಅವರನ್ನು ಸನ್ಮಾನಿಸಿ ದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರೀಫ್ ಮಿಯಾ ಚಾಗಭಾವಿ, ಪಿಎಸ್ಐ ವೆಂಕಟೇಶ ನಾಯಕ, ಸಮೀಕ್ಷೆಯ ಜಿಲ್ಲಾ ತರಬೇತುದಾರ ಗುರು ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಾವೀದ್ ಪಾಷಾ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ, ಸಿಆರ್ಪಿಗಳಾದ ಮಹೇಶ, ವೆಂಕಟೇಶ, ಶಿಕ್ಷಕರಾದ ಚನ್ನವೀರಯ್ಯಸ್ವಾಮಿ, ಅಕ್ಷಯ್ ಹಾಗೂ ಅಮರೇಶ ಇದ್ದರು.
ಮೂರೇ ದಿನಗಳಲ್ಲಿ ಸಮೀಕ್ಷೆ ಮುಗಿಸಿದ ಶಿಕ್ಷಕ
ಅಂಗನವಾಡಿ ಕಾರ್ಯಕರ್ತೆಯರು ಮಸ್ಕಿ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ನಿಗದಿಪಡಿಸಿದ ಮನೆಗಳ ಸಮೀಕ್ಷೆ ಮೂರೇ ದಿನಗಳಲ್ಲಿ ಪೂರ್ಣಗೊಳಿಸಿದ ಶಿಕ್ಷಕ ಹಾಗೂ ಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲ್ಲೂಕು ಆಡಳಿತದಿಂದ ಸೋಮವಾರ ಸನ್ಮಾನಿಸಲಾಯಿತು. ನಿಗದಿಪಡಿಸಿದ ಅವಧಿಗಿಂತ ಮುಂಚಿತವಾಗಿ ಸಮೀಕ್ಷೆ ಪೂರ್ಣಗೊಳಿಸಿದ ಮೂವರು ಶಿಕ್ಷಕರನ್ನು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ ಅವರು ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿದರು. ಮೆದಿಕಿನಾಳದಲ್ಲಿ ಶಿವಪ್ಪ ರಾಠೋಡ ಮಾಟೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆ ಸಿದ್ದಮ್ಮ ಹಾಗೂ ಗದ್ರಟಗಿಯಲ್ಲಿ ಸಮೀಕ್ಷೆ ನಡೆಸಿದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಅವರು ತಮಗೆ ನೀಡಿದ ಜವಾಬ್ದಾರಿಯನ್ನು ಮೂರು ದಿನಗಳಲ್ಲಿಯೇ ಪೂರ್ಣಗೊಳಿಸಿದ್ದಾರೆ ಎಂದು ತಹಶೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.