ರಾಯಚೂರು: ಮಕ್ಕಳು ಶಿಕ್ಷಕರಿಗೆ ಪ್ರಶ್ನೆ ಕೇಳುವ ಪ್ರವೃತಿ ಬೆಳೆಸಿದಾಗ ಮಾತ್ರ ಮಗುವಿಗೆ ಶಿಕ್ಷಣ ಕಲಿಯುವ ಬಗ್ಗೆ ಆಸಕ್ತಿ ಮೂಡಿಸಲು ಸಾಧ್ಯ ಎಂದು ಕಲಬುರ್ಗಿ ಹೆಚ್ಚುವರಿ ಕಾರ್ಯಾಲಯದ ಜಂಟಿ ನಿರ್ದೇಶಕ ವಿಜಯಕುಮಾರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ’ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾರಿಗೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕಾರ್ಯಾಗಾರ’ದಲ್ಲಿ ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಆಧುನಿಕ ಜಗತ್ತಿನಲ್ಲಿ ಅತಿಅವಶ್ಯಕ. ಶಾಲೆಗೆ ಬಿಡುಗಡೆಯಾದ ಅನುದಾನವನ್ನು ಮುಖೋಪಾಧ್ಯಾಯರು ನಿಯಮಾನುಸಾರವಾಗಿ ಬಳಕೆ ಮಾಡಬೇಕು. ಬಿಡುಗಡೆಯಾದ ಅನುದಾನ ಬಳಕೆ ಮಾಡದೆ ಇರುವುದು ಅಪರಾಧ, ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡುತ್ತಿದೆ ಎಂದು ವಿವರಿಸಿದರು.
ಶಿಕ್ಷಕರು ಮಕ್ಕಳಿಗೆ ಪ್ರಶ್ನಿಸುವ ಹಕ್ಕು ನೀಡಬೇಕು. ಶಾಲೆ ಕೋಣೆಯಲ್ಲಿ ಶಿಕ್ಷಕರು ಪಾಠ ಪ್ರವಚನ ಬೋಧಿಸುವ ಸಂದರ್ಭದಲ್ಲಿ ಮಕ್ಕಳಿಗೆ ಯಾವುದೇ ಒಂದು ವಿಷಯವು ಅರ್ಥವಾಗದ ವೇಳೆ ಮಗು ಎದ್ದುನಿಂತು ಪಠ್ಯದ ಬಗ್ಗೆ ಶಿಕ್ಷಕರಿಗೆ ಪ್ರಶ್ನೆ ಕೇಳಿದಾಗ ಅದಕ್ಕೆ ಸಮರ್ಪಕವಾಗಿ ಉತ್ತರಿಸಬೇಕು ಎಂದರು.
ಶಿಕ್ಷಕರು ಮಕ್ಕಳ ಮನ ಮುಟ್ಟುವಂತಹ ಶಿಕ್ಷಣ ನೀಡಿದಾಗ ಮಾತ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಲು ಸಾಧ್ಯ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ 100 ರಷ್ಟು ಬರಲು ಎಲ್ಲ ಶಿಕ್ಷಕರು ಮತ್ತು ಮುಖೋಪಾಧ್ಯಾಯರು ಶ್ರಮಿಸಬೇಕು ಎಂದರು.
ವಿಷಯ ಪರಿವೀಕ್ಷಕ ನಾಗೇಂದ್ರಪ್ಪ ಮಾತನಾಡಿ, ಶಿಕ್ಷಕರು ಶೈಕ್ಷಣಿಕ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕಾಗಿದೆ. ಮುಖ್ಯ ಶಿಕ್ಷಕರು ತಮ್ಮ ಐಚ್ಛಿಕ ವಿಷಯದ ಪಾಠ ಬೋಧನೆಯನ್ನು ವಾರದಲ್ಲಿ ಕನಿಷ್ಠ ಎರಡು ತರಗತಿಗಳನ್ನು ಮಾಡಬೇಕು, ಶಿಕ್ಷಕರಿಗೆ ಸ್ನೇಹ ಪೂರ್ವ ಮಾರ್ಗದರ್ಶನ ನೀಡಬೇಕು ಎಮದು. ಶಾಲಾ ವಾತಾವರಣ ಉತ್ತಮಪಡಿಸುವುದರ ಮೂಲಕ ಆನಂದದಾಯಕ ಕಲಿಕೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಯ ಮುಖೋಪಾಧ್ಯಾಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.