ರಾಯಚೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಟಿನ್ ಶೆಡ್ ಮನೆಗಳಲ್ಲಿ ವಾಸವಾಗಿರುವವರ ಹಾಗೂ ನವಜಾತ ಶಿಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಸಾವು ಸಂಭವಿಸುವ ಸಾಧ್ಯತೆಗಳಿರುವುದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಕೆ.ಎಸ್.ನಸೀರ್ ತಿಳಿಸಿದ್ದಾರೆ.
ಅಧಿಕ ತಾಪಮಾನದಿಂದ ನವಜಾತ ಶಿಶುಗಳಲ್ಲಿ ನಿರ್ಜಲೀಕರಣ ಊಂಟಾಗುವುದು. ಶೇ 60 ರಷ್ಟು ನೀರಿನಿಂದ ಶರೀರ ಕೂಡಿರುತ್ತದೆ. ಉಸಿರಾಟದಿಂದ ಹಿಡಿದು ಪಚನದವರೆಗೂ ದೇಹದ ಪ್ರತಿಯೊಂದು ಕಾರ್ಯಕ್ಕೂ ನೀರಿನ ಅಗತ್ಯವಿದೆ. ಬಿರು ಬಿಸಿಲಿನಲ್ಲಿ ಶಿಶುಗಳು ಜ್ವರ ಹಾಗೂ ಇತ್ಯಾದಿ ಕಾರಣಗಳಿಂದ ದೇಹದಲ್ಲಿ ನೀರಿನ ಮಟ್ಟ ಕುಸಿಯುತ್ತದೆ. ದ್ರವ ಸಮತೋಲನದಲ್ಲಿ ಸ್ವಲ್ಪ ಕೊರತೆಯಾದರೂ ನಿರ್ಜಲೀಕರಣ ಲಕ್ಷಣ ಕಂಡು ಬರುತ್ತದೆ ಎಂದಿದ್ದಾರೆ.
ಶಿಶುಗಳಲ್ಲಿ ಮತ್ತು ಎಳೆ ಮಕ್ಕಳಲ್ಲಿ 3 ಗಂಟೆಗೂ ಹೆಚ್ಚುಕಾಲ ಡೈಪರ್ ಒಣಗಿಯೇ ಇರುವುದು. ಅತ್ತಾಗ ಕಣ್ಣುಗಳಲ್ಲಿ ನೀರು ಬರದಿರುವುದು. ಒಣಗಿದ ಬಾಯಿ, ತೀವ್ರ ಜ್ವರ, ಗುಳಿಬಿದ್ದ ಕಣ್ಣುಗಳು, ಚರ್ಮದ ಬಣ್ಣ ಬೂದಿ ಛಾಯಗೆ ತಿರುಗುವುದು ನಿರ್ಜಲೀಕರಣದ ಲಕ್ಷಣಗಳಾಗಿವೆ. ಶಿಶುಗಳಲ್ಲಿ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾದರೆ, ತುಂಬಾ ಕಿರಿಕಿರಿ ಮಾಡುತ್ತಿದ್ದರೆ, ಹಾಲು ಕುಡಿಯದೇ ಇರುವ ಶಿಶುಗಳನ್ನು ತಜ್ಞ ವೈದ್ಯರಲ್ಲಿ ತೋರಿಸಿ ಸಲಹೆ ಪಡೆಯಬೇಕು ಎಂದು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಶಿಶುಗಳಿಗೆ ನೀರಿನ ಅಂಶದ ಜೊತೆಗೆ ತೂಕವು ಕಡಿಮೆಯಾಗುತ್ತದೆ. 6 ತಿಂಗಳವರೆಗೂ ಎಳೆಮಕ್ಕಳಿಗೆ ನೀರು ಕುಡಿಸದೇ ಸರಿಯಾಗಿ ಆರೈಕೆ ಮಾಡಬೇಕು. ಎದೆಹಾಲು ಪದೇ ಪದೇ ಕುಡಿಸಬೇಕು. ಒಂದರಿಂದ ಮೂರು ಗಂಟೆಯ ಅವಧಿಯಲ್ಲಿ ಒಮ್ಮೆಯಾದರೂ ಮಗು ಮೂತ್ರ ಮಾಡಿರಬೇಕು. ಸಡಿಲವಾದ ಕಾಟನ್ ಬಟ್ಟೆ ಧರಿಸಬೇಕು. ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು. ರೂಮಿನಲ್ಲಿ ಬಕೆಟ್ ನೀರನ್ನಿಟ್ಟು ಫ್ಯಾನ್ ಹಾಕುವುದರಿಂದ ತಂಪಾದ ಗಾಳಿ ಸಿಗುತ್ತದೆ. ಈ ರೀತಿಯ ಕ್ರಮಗಳನ್ನು ಅನುಸರಿಸಿದರೆ ನಿರ್ಜಲೀಕರಣ ಸುಲಭವಾಗಿ ನಿರ್ವಹಿಸಬಹುದು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.