ADVERTISEMENT

ಭೂ ಒಡೆತನ ಯೋಜನೆ: ತನಿಖೆಯಾಗಲಿ

ಸಿಂಧನೂರು ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಶಾಸಕ ನಾಡಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2021, 2:42 IST
Last Updated 27 ಜುಲೈ 2021, 2:42 IST
ಸಿಂಧನೂರು ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು
ಸಿಂಧನೂರು ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಯಿತು   

ಸಿಂಧನೂರು: ‘ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ 2019-20 ಹಾಗೂ 2020-21ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದ್ದು, ಈ ಕುರಿತು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಸಚಿವರ ಗಮನಕ್ಕೆ ತಂದು ತನಿಖೆಗೆ ಆದೇಶಿಸಲಾಗುವುದು. ಅಲ್ಲಿಯವರೆಗೂ ಫಲಾನುಭವಿಗಳಿಗೆ ಜಮೀನುಗಳ ನೋಂದಣಿ ಮಾಡಿಸಬಾರದು’ ಎಂದು ಶಾಸಕ ವೆಂಕಟರಾವ್ ನಾಡಗೌಡ ಸೂಚನೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

‘ಭೂ ಒಡೆತನ ಯೋಜನೆಯಡಿ ಜವಳಗೇರಾ ಫಲಾನುಭವಿಗೆ 20 ಕಿ.ಮೀ ದೂರದಲ್ಲಿ ಭೂಮಿ ಕೊಟ್ಟರೆ ಹೇಗೆ, ಬೇರೆ ಊರಿಗೆ ಹೋಗಿ ಕೃಷಿ ಮಾಡಲು ಸಾಧ್ಯವೇ, ಹೀಗಾದರೆ ಯೋಜನೆಯ ಉದ್ದೇಶ ಈಡೇರುತ್ತದೆಯೇ’ ಎಂದು ಪ್ರಶ್ನಿಸಿದರು.

ADVERTISEMENT

‘ಯಾರದೋ ಹೊಲವನ್ನು ಮಧ್ಯವರ್ತಿಗಳು ತೆಗೆದುಕೊಂಡು ನಿಗಮಕ್ಕೆ ಕೊಟ್ಟು ಫಲಾನುಭವಿಗಳಿಂದ ₹50 ಸಾವಿರ ಹಣ ತಿಂದು ಜಮೀನು ನೋಂದಣಿ ಮಾಡಿಸಿದ ಕುರಿತು ಅನೇಕ ದೂರುಗಳು ಬಂದಿವೆ. ಇನ್ನೂ ಗಂಗಾ ಕಲ್ಯಾಣ ಯೋಜನೆಯಡಿ 45 ಕೊಳವೆಬಾವಿಗಳನ್ನು ಇದುವರೆಗೂ ಕೊರೆಯಿಸಿಲ್ಲ. ಪರಿಶಿಷ್ಟ ಜಾತಿ ಜನಾಂಗದ ಕಲ್ಯಾಣದ ಹೆಸರಿನಲ್ಲಿ ನಿಗಮಗಳ ಅಧಿಕಾರಿಗಳು ಸರ್ಕಾರದ ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಇನ್ನು ನಾಲ್ಕು ದಿನಗಳಲ್ಲಿ ನಿಗಮಗಳ ವಿವಿಧ ಯೋಜನೆಗಳ ಪ್ರಗತಿ ಮತ್ತು ಬಾಕಿ ಕೆಲಸಗಳ ಕುರಿತು ಸ್ಪಷ್ಟ ಮಾಹಿತಿ ಕೊಡಬೇಕು’ ಎಂದು ತಿಳಿಸಿದರು.

ಸಭೆಗೆ ಗೈರು: ನಗರಸಭೆ, ಕಾರ್ಮಿಕ ಇಲಾಖೆ, ಸಣ್ಣ ನೀರಾವರಿ ಇಲಾಖೆ, ನಗರಾಭಿವೃದ್ದಿ ಇಲಾಖೆ, ಕೆಎಂಎಫ್, ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಮತ್ತಿತರ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ. ಪ್ರಗತಿ ವರದಿಯನ್ನು ಸಹ ಕೊಟ್ಟಿಲ್ಲ. ಇವರಿಗೆ ಕೆಡಿಪಿ ಸಭೆಯ ಗಂಭೀರತೆ ಗೊತ್ತಿಲ್ವಾ, ಬರೀ ಚಹ ಕುಡಿದು ಹೋಗೋದು ಅಂದುಕೊಂಡಿದ್ದಾರಾ ಎಂದು ಶಾಸಕ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಯಾಕೆ ಬಂದಿಲ್ಲ ಎಂದು ಶಾಸಕರು ಪ್ರಶ್ನಿಸಿದರು. ತಾ.ಪಂ ಯಿಂದ ನೋಟಿಸ್ ಕಳುಹಿಸಿಲ್ಲ. ಮಾಹಿತಿಯೂ ಇಲ್ಲ ಎಂದು ಪೌರಾಯುಕ್ತರು ಪ್ರತಿಕ್ರಿಯಿಸಿದರು. ಇದರಿಂದ ತಾ.ಪಂ. ಇಒ ಮತ್ತು ವ್ಯವಸ್ಥಾಪಕರ ನಡೆಗೆ ಶಾಸಕರು ಬೇಸರ ವ್ಯಕ್ತಪಡಿಸಿ, ಸಭೆಗೆ ಬರದೆ ಬೇಜವಾಬ್ದಾರಿ ತೋರಿದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ತಹಶೀಲ್ದಾರ್ ಮಂಜುನಾಥ ಭೋಗಾವತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಕ್ರೀಡಾ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.