ಹಟ್ಟಿ ಚಿನ್ನದ ಗಣಿ: ಪಟ್ಟಣದ ಸಮೀಪದ ಹೀರೆ ಹೆಸರೂರು ಗ್ರಾಮದಲ್ಲಿ ಒಣ ಹುಲ್ಲು ಸಾಗಿಸುವಾಗ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿ ಉರಿದಿದೆ.
ರೈತ ಸಂಗಪ್ಪ ಅವರು ಆನೆಹೊಸೂರು ಗ್ರಾಮದಿಂದ ಹೀರೆ ಹೆಸರೂರು ಗ್ರಾಮಕ್ಕೆ ಒಣ ಹುಲ್ಲನ್ನು ಟ್ರ್ಯಾಕ್ಟರ್ ಮೂಲಕ ಸಾಗಿಸುವಾಗ ಈ ಅವಘಡ ನಡೆದಿದೆ. ಬೆಂಕಿ ಹೊತ್ತಿದ ಕೆಲವೇ ನಿಮಿಷಗಳಲ್ಲಿ ಒಣ ಹುಲ್ಲು ಸುಟ್ಟು ಬೂದಿಯಾಗಿದೆ. ಗ್ರಾಮಸ್ಧರು ಸೇರಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಗ್ನಿ ಶಾಮಕ ದಳ ಬಂದ ನಂತರ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು.
ಅವಘಡದಲ್ಲಿ ₹1.20 ಮೌಲ್ಯದ ಟ್ರಾಲಿ, ₹ 20 ಸಾವಿರ ಮೌಲ್ಯದ ಒಣ ಹುಲ್ಲು ಬೆಂಕಿಗೆ ಆಹುತಿಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
‘ಅಗ್ನಿ ನಂದಿಸಲು 22 ಕಿ.ಮೀ. ದೂರದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬರಬೇಕಾಗಿದೆ. ಅಲ್ಲಿಂದ ಬರುವಷ್ಟರಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಸಾಧ್ಯವಾಗದೇ ರೈತರು ನಷ್ಟ ಅನುಭವಿಸುತ್ತಾರೆ. ಹಟ್ಟಿ ಪಟ್ಟಣದಲ್ಲೇ ಅಗ್ನಿ ಶಾಮಕ ದಳದ ಕಚೇರಿ ತೆರೆದರೆ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ರೈತ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.