ರಾಯಚೂರು: ಉತ್ತಮ ಅಂಕ ಗಳಿಕೆ ಸಾಧನೆಯೊಂದಿಗೆ 6 ಚಿನ್ನದ ಪದಕ ವಿಜೇತರಾದ ವಿದ್ಯಾರ್ಥಿನಿಗೆ ಪ್ರಾಧ್ಯಾಪಕಿಯಾಗುವ ಗುರಿ ಇದ್ದರೆ, ಐದು ಪದಕ ವಿಜೇತರಾದ ವಿದ್ಯಾರ್ಥಿಗೆ ಕೃಷಿ ವಿಜ್ಞಾನಿಯಾಗುವ ಕನಸು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವದಲ್ಲಿ ಕೇರಳದ ಗೀತಿಕಾ ಟಿ.ವಿ ಮತ್ತು ಬಿಹಾರದ ವಿದ್ಯಾರ್ಥಿ ಕೇಸರಿ ಸುಂದರ ವರ್ಮಾ ಕ್ರಮವಾಗಿ 6 ಮತ್ತು 5 ಪದಕಗಳು, ಪ್ರಮಾಣಪತ್ರ ಸ್ವೀಕರಿಸಿ ಸಂಭ್ರಮಿಸಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದಕ, ಪ್ರಮಾಣಪತ್ರ ಪ್ರದಾನ ಮಾಡಿದರು.
ಆಟೊ ಚಾಲಕ ಕೆ.ಸುರೇಶಕುಮಾರ್ ಅವರ ಪುತ್ರಿ ಗೀತಿಕಾ ಅವರು ಕೃಷಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗುವ ಕನಸು ಹೊಂದಿದ್ದಾರೆ. ಹೆಚ್ಚು ಚಿನ್ನದ ಪದಕಗಳು ಬಂದಿರುವುದಕ್ಕೆ ಖುಷಿಯಾಗಿದೆ ಎಂದು ಪ್ರತಿಕ್ರಿಯಿಸಿದರು.
‘ಶಿಕ್ಷಕರ ಸಲಹೆಯಂತೆ ಕೃಷಿ ಪದವಿ ಪೂರ್ಣಗೊಳಿಸಿರುವೆ. ಕೇರಳದ ಕೃಷಿ ವಿ.ವಿ.ಯಲ್ಲಿ ಸಸ್ಯ ರೋಗಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದಿದ್ದೇನೆ’ ಎಂದು ಗೀತಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.
45ಚಿನ್ನದ ಪದಕಗಳ ಪ್ರದಾನ: ವಿವಿಧ ವಿಭಾಗಗಳಲ್ಲಿ 32 ವಿದ್ಯಾರ್ಥಿಗಳು ಚಿನ್ನದ ಪದಕಗಳಿಗೆ ಪಾತ್ರರಾದರು. ಪದವಿಯಲ್ಲಿ 21, ಸ್ನಾತಕೋತ್ತರ ಪದವಿಯಲ್ಲಿ 14, ಡಾಕ್ಟರೇಟ್ ಪದವಿಯಲ್ಲಿ 10 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. 303 ಪದವಿ, 107 ಸ್ನಾತಕೋತ್ತರ, 26 ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.