ರಾಯಚೂರು: ಇಎಫ್ಎಂಎಸ್ ವೇತನಕ್ಕಾಗಿ ಎಲ್ಲ ಗ್ರಾಮ ಪಂಚಾಯಿತಿಗಳ ಸಿಬ್ಬಂದಿಯ ಮಾಹಿತಿಯನ್ನು ಪಂಚತಂತ್ರಾಂಶದಲ್ಲಿ ಅಳವಡಿಸಲು ಪಿಡಿಒಗಳಿಗೆ ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸೋಮವಾರ ಧರಣಿ ನಡೆಸಿದರು.
ಇಎಫ್ಎಂಎಸ್ ವೇತನದಿಂದ ಕೈಬಿಟ್ಟ ಸಿಬ್ಬಂದಿಯ ಮಾಹಿತಿಯನ್ನು ಪಿಡಿಒ ಲಾಗಿನ್ಗಳಲ್ಲಿ ಎಂಟ್ರಿ ಮಾಡಲು ಸೂಚಿಸಬೇಕು. 2019ರ ಮೇ 22ರ ಆದೇಶದಂತೆ ಇಎಫ್ಎಂಎಸ್ಗಾಗಿ ಕೈಬಿಟ್ಟ ಸಿಬ್ಬಂದಿಯ ದಾಖಲೆಗಳ ಪರಿಶೀಲನೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ನೌಕರರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಪಂಚಾಯಿತ್್ ರಾಜ್ ಇಲಾಖೆ ಗ್ರಾಮ ಪಂಚಾಯಿತಿ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಲು ಮುಂದಾಗಿದ್ದು, ಪಂಚತಂತ್ರದಲ್ಲಿ ಸಿಬ್ಬಂದಿಯ ಮಾಹಿತಿ ಅಳವಡಿಸಲು ಪಿಡಿಒಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಎಫ್ಎಂಎಸ್ ವೇತನದಿಂದ ಕೈಬಿಟ್ಟಿರುವ 2016ರ ಆದೇಶದಂತೆ ಹೆಚ್ಚುವರಿ ಕರವಸೂಲಿಗಾರರನ್ನು ಮತ್ತು ಕಸಗೂಡಿಸುವ ಸಿಬ್ಬಂದಿಯನ್ನು ಇಒ ಲಾಗಿನ್ನಿಂದ ಒಕೆ ಮಾಡಬೇಕು. ಕಸವಸೂಲಾತಿಯ ಶೇ 40ರಷ್ಟು ಮೊತ್ತದಲ್ಲಿ ಸಿಬ್ಬಂದಿಗೆ ಬಾಕಿ ವೇತನಕ್ಕಾಗಿ ವೇತನ ನೀಡಲು ಪಿಡಿಒಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯಿತಿ ಸಿಬ್ಬಂದಿಯ ಅನುಮೋದನೆಗಾಗಿ ದಾಖಲೆ ಪರಿಶೀಲನೆ ಮಾಡಿ ಅನುಮೋದನೆ ನೀಡಬೇಕು. ಹತ್ತು ಮತ್ತು ಎಂಟು ವರ್ಷ ಪೂರೈಸಿದ ಕರವಸೂಲಿಗಾರರನ್ನು ಜೇಷ್ಠತಾ ಆಧಾರದ ಮೇರೆಗೆ ಗ್ರೇಡ್ –2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು. 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಂಪ್ ಆಪರೇಟರ್, ಕಸಗೂಡಿಸುವ ಹಾಗೂ ಜವಾನ ಸಿಬ್ಬಂದಿಗೆ ಏಕಕಾಲಕ್ಕೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಘಟಕ ಅಧ್ಯಕ್ಷ ಮಾರುತಿ ಮಾನ್ಪಡೆ, ಜಿಲ್ಲಾ ಘಟಕ ಅಧ್ಯಕ್ಷ ಅಮರೇಶ ಪಾಟೀಲ, ಕೆ.ನಾರಾಯಣ, ಮಹಾದೇವಪ್ಪ ಜಂಬಲದಿನ್ನಿ, ಸಿಐಟಿಯು ಜಿಲ್ಲಾ ಅಧ್ಯಕ್ಷೆ ಎಚ್.ಪದ್ಮಾ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಶೇಕ್ಷಾಖಾದ್ರಿ, ಶಿವಾರೆಡ್ಡಿ ಪೈದೊಡ್ಡಿ, ಮಲ್ಲಿಕಾರ್ಜುನ, ಬಾಲಪ್ಪ, ಬಸವರಾಜ, ನಿತ್ಯಾನಂದ, ಶಿವರಾಜಸ್ವಾಮಿ, ಶೇಖರಪ್ಪಗೌಡ, ಚೌಡಯ್ಯನಾಯಕ, ಸೂಗಪ್ಪ, ಲಿಂಗಪ್ಪ, ರಾಮುನಾಯಕ, ಮಲ್ಲಪ್ಪ, ಶ್ರೀರಾಮುಲು, ರಮೇಶ, ಹಜರತ್ ಅಲಿ, ಪಂಚಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.