ADVERTISEMENT

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಕರ್ನಾಟಕ ಜನ ಜಾಗೃತಿ ಸಮಿತಿ ಜಿಲ್ಲಾ ಘಟಕದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 15:57 IST
Last Updated 6 ಆಗಸ್ಟ್ 2019, 15:57 IST
ರಾಯಚೂರಿನಲ್ಲಿ ಮಂಗಳವಾರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಮಂಗಳವಾರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಜಿಲ್ಲಾ ಘಟಕದ ಸದಸ್ಯರು ಪ್ರತಿಭಟನೆ ನಡೆಸಿದರು   

ರಾಯಚೂರು: ತಾಲ್ಲೂಕು ಹಾಗೂ ಗ್ರಾಮಗಳ ಮೂಲ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ಜಿಲ್ಲಾ ಘಟಕದ ಸದಸ್ಯರು ನಗರದ ಟಿಪ್ಪು ಸುಲ್ತಾನ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಹಲವು ಗ್ರಾಮಗಳಲ್ಲಿ ಮೂಲ ಸೌಕರ್ಯಗಳಿಲ್ಲ. ವಿದ್ಯುತ್ ಸಮಸ್ಯೆ, ರಸ್ತೆ, ಚರಂಡಿ, ಶೌಚಾಲಯ, ನರೇಗಾ ಕೂಲಿ ಪಾವತಿ ಹಾಗೂ 14ನೇ ಹಣಕಾಸಿನ ಸಮಸ್ಯೆಗಳಿವೆ. ನರೇಗಾ ಯೋಜನೆಯಡಿ ಕಳಪೆ ಕಾಮಗಾರಿಗಳು ನಡೆಸಲಾಗಿದ್ದು, ತನಿಖೆ ಮಾಡಬೇಕು. ಬಡಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಿಂದ ಗಾರಲದಿನ್ನಿ ಗ್ರಾಮದವರೆಗೆ ರಸ್ತೆ ನಿರ್ಮಾಣ ಮಾಡಬೇಕು. ಕುರ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯಿತಿಗೆ ಭೇಟಿ ನೀಡದ ಪರಿಣಾಮ ಕೆಲಸಗಳು ಕುಂಠಿತವಾಗಿದ್ದು, ಅಗತ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಹಿರೇ ಕೊಟ್ನೆಕಲ್ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳನ್ನು ಹಾಗೂ 14ನೇ ಹಣಕಾಸಿನ ಅನುದಾನದ ಬಳಕೆಯನ್ನು ತನಿಖೆ ಮಾಡಬೇಕು. ಕುಡಿಯುವ ನೀರಿನ ಯೋಜನೆ ತನಿಖೆ ಮಾಡಿಸಬೇಕು ಎಂದರು.

ಸಿಂಧನೂರು ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳಲ್ಲಿ 30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಬೇಕು. ಕೃಷಿ ಸಹಾಯಕ ಅಧಿಕಾರಿ ಹಾಗೂ ರೈತರಿಗೆ 2017ರಿಂದ 2019ರವರೆಗೆ ಬಂದ ಅನುದಾನ ದುರ್ಬಳಕೆಯಾಗಿದ್ದು, ಕಾನೂನು ಕ್ರಮ ಜರುಗಿಸಬೇಕು. ಉಪ್ಪಳ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಬಗೆಹರಿಸಬೇಕು. ಸಿಂಚರಡಿ ಗ್ರಾಮಕ್ಕೆ ವಿದ್ಯುತ್ ಸೌಕರ್ಯ ನೀಡಬೇಕು ಎಂದು ಆಗ್ರಹಿಸಿದರು.

ಮಸ್ಕಿ ತಾಲ್ಲೂಕಿನ ಅಮೀನಗಡ, ಸಿಂಧನೂರು ತಾಲ್ಲೂಕಿನ ಇರಪೂರ, ಗೋರೆಬಾಳ, ಬೆಳಗುರ್ಕಿ ಮತ್ತು ಮಾನ್ವಿ ತಾಲ್ಲೂಕಿನ ತುಪ್ಪದೂರು, ಮಾಡಗಿರಿ, ಮಾಚನೂರು, ಬೇವಿನೂರು, ಬೊಮ್ಮನಾಳ, ವಟಗಲ್, ಕವಿತಾಳ, ಆಲ್ದಾಳ, ನೀರಮಾನ್ವಿ, ಬಾಗಲವಾಡ ಹಾಗೂ ರಾಯಚೂರು ತಾಲ್ಲೂಕಿನ ಮಟಮಾರಿ, ಹಂಚಿನಾಳ, ದುಗನೂರು, ಹೊಸೂರು, ಪುರತಿಪ್ಲಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ವಿಭಾಗೀಯ ಅಧ್ಯಕ್ಷ ರವಿಕುಮಾರ ಕುರ್ಡಿ, ಜಿಲ್ಲಾ ಅಧ್ಯಕ್ಷ ರಮೇಶ ಬಸಾಪುರ, ಸುರೇಶ ಕೆ.ತುಪ್ಪದೂರು, ಗಂಗಮ್ಮ ಅಮೀನಗಡ, ವಿಜಯ, ಆನಂದ, ರಾಮಣ್ಣ ಬಾಗಲವಾಡ, ವೀರೇಶನಾಯಕ, ಪ್ರಸಾದ, ಉಪ್ಪಳಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.