ರಾಯಚೂರು: ನಗರದ ತೀನ್ ಖಂದಿಲ್ ವೃತ್ತದಿಂದ ಅಶೋಕ ಡಿಪೋ ವೃತ್ತದವರೆಗೆ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ, ತರಕಾರಿ ಮಾರುಕಟ್ಟೆಯ ಹಿಂಭಾಗದ ಸ್ವಚ್ಛತೆ, ಎಂ. ಈರಣ್ಣ ವೃತ್ತದ ಬಳಿಯ ಬೊಂಗ ಬಿದ್ದ ಕಾಲುವೆ ಕಾಮಗಾರಿ ಆರಂಭಕ್ಕೆ ವಿಳಂಬಧೋರಣೆ ಮುಂದುವರೆಸಿದ್ದಲ್ಲಿ ನಗರಸಭೆ ಅಧ್ಯಕ್ಷರ ಕಾರ್ಯಾಲಯದ ಮುಂದೆ ಜನವರಿ 18 ರಂದು ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಧರಣಿ ನಡೆಸಲಾಗುವುದು ಎಂದು ರಾಯಚೂರು ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್. ಮಹಾವೀರ ಎಚ್ಚರಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೀನ್ ಖಂದಿಲ್ ವೃತ್ತದಿಂದ ಅಶೋಕ ಡಿಪೋ ರಸ್ತೆ ಕಾಮಗಾರಿ, ತರಕಾರಿ ಮಾರುಕಟ್ಟೆಯ ಹಿಂಭಾಗದ ರೈತ ಮಾರುಕಟ್ಟೆಗೆ ಶುಲ್ಕ ವಸೂಲಿ ಹಾಗೂ ಎಂ. ಈರಣ್ಣ ವೃತ್ತದ ಬಳಿಯ ಬೊಂಗ ಬಿದ್ದು ತಿಂಗಳು ಗತಿಸಿದೆ. ಆದರೂ ಕೂಡ ನಗರಸಭೆಯಿಂದ ಕಾಮಗಾರಿ ಆರಂಭಿಸುತ್ತಿಲ್ಲ. ಈ ಬಗ್ಗೆ ಅಧ್ಯಕ್ಷ ಈ. ವಿನಯಕುಮಾರ ಅವರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು.
ನಗರಸಭೆ ಅಧ್ಯಕ್ಷ ವಿನಯಕುಮಾರ ಅವರ ತಂದೆ ಅಂಜಿನಯ್ಯ ಅವರು ನಗರ ಸೌಂದರ್ಯೀಕರಣಕ್ಕೆ 13,000 ಸಾವಿರ ಗಿಡ ಸಸಿಗಳನ್ನು ನೀಡಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಷಿರುದ್ದೀನ್ ಸಸಿಗಳನ್ನು ಖರೀದಿ ಮಾಡಿದ್ದು ಯಾವ ಅನುದಾನದಲ್ಲಿ ಎಂದು ಪ್ರಸ್ನಿಸಿದರು. ಇದಕ್ಕೆ ಪೌರಾಯುಕ್ತರು ಹಾಗೂ ನಗರಸಭೆ ಅಧ್ಯಕ್ಷರು ಉತ್ತರ ನೀಡಿಲ್ಲ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ವಿನಯಕುಮಾರ ಅವರು ಕಾಮಗಾರಿಗಳಿಗೆ ಚಾಲನೆ ನಿಡದೇ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳೊಂದಿಗೆ ಕಾರ್ಯ ನಿರ್ವಹಿಸಲು ವಿಫಲರಾಗಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಪ್ರಭುನಾಯಕ, ಕೆ.ವಿ. ಖಾಜಪ್ಪ, ಮೊಹಮ್ಮದ್ ಶಾ ಖಾನ್, ಬಸವರಾಜ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.