ADVERTISEMENT

ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 12:42 IST
Last Updated 12 ನವೆಂಬರ್ 2020, 12:42 IST
 ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು
 ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರು ರೈಲ್ವೆ ನಿಲ್ದಾಣದ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು   

ರಾಯಚೂರು: ಗುಂತಕಲ್‌ನಿಂದ ವಿಜಯಪುರ ಹಾಗೂ ರಾಯಚೂರು ಗುಂತಕಲ್ ಪ್ಯಾಸೆಂಜರ್ ರೈಲು ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ರಾಯಚೂರು ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ರಾಯಚೂರಿನ ವ್ಯವಸ್ಥಾಪಕರ ಮೂಲಕ ಗುಂತಕಲ್ ರೈಲ್ವೆ ವಿಭಾಗದ ವ್ಯವಸ್ಥಾಪಕರಿಗೆ ಗುರುವಾರ ಮನವಿ ಸಲ್ಲಿಸಿದರು.

ಕಳೆದ ಏಳು ತಿಂಗಳಿನಿಂದ ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಮಾತ್ರ ಆರಂಭಿಸಲಾಗಿದೆ. ಈಗ ಲಾಕ್‍ಡೌನ್ ಸಡಿಲಿಕೆಯಿಂದ ಪ್ಯಾಸೆಂಜರ್ ರೈಲನ್ನು ಗುಂತಕಲ್-ಹಿಂದೂಪುರದವರೆಗೆ ಸಂಚಾರ ಆರಂಭಿಸಲಾಗಿದೆ. ರಾಯಚೂರು ಭಾಗದ ಪ್ಯಾಸೆಂಜರ್ ರೈಲು ಸಂಚಾರ ಯಾಕೆ ಆರಂಭಿಸಿಲ್ಲ ಎಂದು ಗೊತ್ತಾಗಿಲ್ಲ ಎಂದು ದೂರಿದರು.

ಈ ಎರಡು ರೈಲುಗಳ ಮೂಲಕ ಬಡ, ಕೂಲಿ ಕಾರ್ಮಿಕರಿಗೆ ರೈತರು ಹೆಚ್ಚಾಗಿ ಸಂಚರಿಸುತ್ತಿದ್ದು, ಕೂಡಲೇ ಸರ್ಕಾರದ ಆದೇಶ, ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿ ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಕುಮಾರ ಸಿ.ಕೆ ಜೈನ್, ಪದಾಧಿಕಾರಿ ಮಲ್ಲಿಕಾರ್ಜುನ, ಕೆ.ಕಿಶನರಾವ, ಆಸೀಫ್, ಸಂಜಯ, ವೈಷ್ಣವ, ಅಜೀಜ್, ಭೀಮೇಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.