ADVERTISEMENT

ರಾಷ್ಟ್ರೀಯ ಪೌರತ್ವ ಕಾಯ್ದೆ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 13:11 IST
Last Updated 19 ಡಿಸೆಂಬರ್ 2019, 13:11 IST

ರಾಯಚೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ಕಾಯ್ದೆ ರದ್ದು ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಭಂಡಾರಿ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೋಟು ಅಮಾನ್ಯೀಕರಣ ಮಾಡಿದ್ದರಿಂದ ದುಡಿಯುವ ಕಾರ್ಮಿಕ ವರ್ಗ, ಮಧ್ಯಮವರ್ಗ, ರೈತಾಪಿ ವರ್ಗದವರನ್ನು ನಷ್ಟ ಅನುಭವಿಸುವಂತೆ ಮಾಡಿದರು. ಜಿಎಸ್‌ಟಿ ಜಾರಿ ಮಾಡಿ ದೊಡ್ಡ ಕಂಪನಿಗಳು ನಷ್ಟ ಅನುಭವಿಸಿವೆ. ಅನೇಕ ಉದ್ಯೋಗಿಗಳು ಇಂದು ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ರೈಲ್ವೆ ಇಲಾಖೆ ವಾಯುಯಾನ ಸೇರಿದಂತೆ ಇನ್ನಿತರ ಇಲಾಖೆಗಳನ್ನು ಖಾಸಗೀಕರಣ ಮಾಡಿ, ಅಂಬಾನಿ, ಅದಾನಿ ಸೇರಿದಂತೆ ಇನ್ನಿತರ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.

ಈಗ ದೇಶದಲ್ಲಿ ರಾಷ್ಟ್ರೀಯ ಪೌರತ್ವ ಕಾಯ್ದೆ ಜಾರಿಗೆ ತಂದು ಅಸ್ಸಾಂನಲ್ಲಿ 19 ಲಕ್ಷ ಜನರನ್ನು ಹೊರಹಾಕುತ್ತಿದ್ದಾರೆ. ಈ ಕಾಯಿದೆಯಿಂದಾಗಿ ದೇಶದೆಲ್ಲೆಡೆ ಪ್ರತಿಭಟನೆ ಹೆಚ್ಚಾಗಿ ಜನ ಜೀವನ ಹಿಂಸಾಚಾರಕ್ಕೆ ತಿರುಗಿದೆ. ದೇಶದಲ್ಲಿ ಅರಾಜಕತೆ ಉಂಟಾಗಿದೆ. ಇಷ್ಟೆಲ್ಲಾ ಆದರೂ ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರೀಯ ಪೌರತ್ವ ಕಾಯ್ದೆ ರದ್ದು ಮಾಡದೇ ಅಮಾಯಕ ಜನರ ಮೇಲೆ ಪೊಲೀಸ್ ಇಲಾಖೆಯಿಂದ ದೌರ್ಜನ್ಯ ನಡೆಸುತ್ತಿದೆ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಶೀಘ್ರವೇ ರಾಷ್ಟ್ರೀಯ ಪೌರತ್ವ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಂ.ಆರ್.ಭೇರಿ, ವೀರೇಶ ಕುಮಾರ್, ಸೈಯದ್ ಫಾರೂಕ್ ಖಾಜಿ, ವಿನಾಯಕ, ನರೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.