ಲಿಂಗಸುಗೂರು: ‘ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಹಿಂದೂ ಸಮಾಜವನ್ನು ಒಡೆಯುವ ಕೊಳಕು ರಾಜಕಾರಣ ಮಾಡುತ್ತಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕ್ರೈಸ್ತ ಜಾತಿಗಳನ್ನು ಹಿಂದೂ ಜಾತಿಗಳ ನಡುವೆ ಎಳೆದು ತಂದು ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಗೊಂದಲ ನಿರ್ಮಾಣ ಮಾಡಿದೆ. ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ, ಕುರುಬ ಸಮಾಜಗಳು ಸೇರಿ ಎಲ್ಲಾ ಹಿಂದುಳಿದ ಸಮಾಜಗಳ ಪ್ರಮುಖರು, ಮಠಾಧೀಶರು, ಪರಿಶಿಷ್ಟ ಜಾತಿ, ಪಂಗಡಗಳ ನಾಯಕರು, ಸ್ವತಃ ಕಾಂಗ್ರೆಸ್ ಮಂತ್ರಿಗಳು ಒತ್ತಡ ತಂದರೂ ಸಿದ್ಧರಾಮಯ್ಯನವರು ಕ್ರೈಸ್ತ ಜಾತಿಗಳ ಪಟ್ಟಿಯನ್ನು ಇನ್ನೂ ಹಿಂದಕ್ಕೆ ಪಡೆದಿಲ್ಲ’ ಎಂದರು.
‘ವೈಜ್ಞಾನಿಕ, ಸಮರ್ಪಕ ಪೂರ್ವ ತಯಾರಿಯೊಂದಿಗೆ ಮಾಡುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನಮ್ಮ ಬೆಂಬಲವಿದೆ. ಆದರೆ, ಸಾಮಾಜಿಕ ನ್ಯಾಯ ಬಲಪಡಿಸುವ ಬದಲು ಜಾತಿಗಳನ್ನು ಎತ್ತಿಕಟ್ಟಿ ಸ್ವಾರ್ಥ ರಾಜಕಾರಣದ ಉದ್ದೇಶದಿಂದ ನಡೆಸುವ ಸಮೀಕ್ಷೆಗೆ ನಮ್ಮ ಬೆಂಬಲವಿಲ್ಲ’ ಎಂದು ಹೇಳಿದರು.
‘ಸಮೀಕ್ಷೆಗೆ ಸಂಬಂಧಿಸಿದಂತೆ 1,400 ಜಾತಿಗಳ ಪಟ್ಟಿಯ ಕುರಿತು ಪ್ರಕಟಣೆ ನೀಡಲಾಗಿತ್ತು. ಆ ಪಟ್ಟಿಯಲ್ಲಿ ಅನಧಿಕೃತ ಕ್ರೈಸ್ತ ಜಾತಿಗಳೂ ಸೇರಿದ್ದವು. ಅನಧಿಕೃತ ಜಾತಿಗಳ ಪಟ್ಟಿ ಕೈಬಿಟ್ಟಿರುವ ಬಗ್ಗೆ ಪ್ರಕಟಣೆ ಹೊರಡಿಸಬೇಕು. ಇಲ್ಲದಿದ್ದರೆ ಸರ್ಕಾರ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.