ADVERTISEMENT

ಕತ್ತಲಲ್ಲಿ ಕಾಯಿಪಲ್ಲೆ ಸಂತೆ: ರೈತರಿಗೆ ಅನಾನುಕೂಲವಾದ ಮಾರುಕಟ್ಟೆ

ನಾಗರಾಜ ಚಿನಗುಂಡಿ
Published 4 ಜುಲೈ 2020, 14:28 IST
Last Updated 4 ಜುಲೈ 2020, 14:28 IST
ರಾಯಚೂರಿನ ಹತ್ತಿ ಮಾರುಕಟ್ಟೆಗೆ ಸ್ಥಳಾಂತರಿಸಿದ ರೈತಸಂತೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದೆ ನಿತ್ಯ ರೈತರು ಪರದಾಡುತ್ತಿದ್ದಾರೆ
ರಾಯಚೂರಿನ ಹತ್ತಿ ಮಾರುಕಟ್ಟೆಗೆ ಸ್ಥಳಾಂತರಿಸಿದ ರೈತಸಂತೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲದೆ ನಿತ್ಯ ರೈತರು ಪರದಾಡುತ್ತಿದ್ದಾರೆ   

ರಾಯಚೂರು: ನಗರದ ರೈತ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಕಾಯಿಪಲ್ಲೆ ಸಂತೆಯನ್ನು ಲಾಕ್‌ಡೌನ್‌ ಅವಧಿಯಲ್ಲಿ ಎಪಿಎಂಸಿ ಕಾಟನ್‌ ಮಾರ್ಕೆಟ್‌ಗೆ ಸ್ಥಳಾಂತರ ಮಾಡಿದ್ದು, ಯಾವುದೇ ಸೌಕರ್ಯಗಳನ್ನು ಕಲ್ಪಿಸಿಲ್ಲ. ಸುತ್ತಮುತ್ತಲಿನ ಗ್ರಾಮಗಳಿಂದ ಕಾಯಿಪಲ್ಲೆ ಮಾರಾಟಕ್ಕಾಗಿ ನಸುಕಿನಲ್ಲಿ ಧಾವಿಸುವ ರೈತರು ಕತ್ತಲಲ್ಲಿ ಕುಳಿತು ಪರದಾಡುತ್ತಿದ್ದಾರೆ!

ಸಾಮಾನ್ಯವಾಗಿ, ಕಿರಾಣಿ ಅಂಗಡಿದಾರರು ಹಾಗೂ ತಳ್ಳುಗಾಡಿಯವರು ರೈತರಿಂದ ತರಕಾರಿ ಖರೀದಿಸುವುದಕ್ಕಾಗಿ ನಸುಕಿನ 3.30 ರಿಂದ ಬೆಳಗಿನ 5.30 ಗಂಟೆವರೆಗೂ ಧಾವಿಸುತ್ತಾರೆ. ಮೊಬೈಲ್‌ ದೀಪದ ನೆರವಿನಿಂದಲೇ ತರಕಾರಿ ಪ್ರಮಾಣ ಮತ್ತು ಅದರ ಗುಣಮಟ್ಟ ಗುರುತಿಸಿ ಚೌಕಾಸಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಮೂರು ತಿಂಗಳುಗಳಾದರೂ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಿಲ್ಲ.

ಕೊರೊನಾ ಮಾರಿ ಹೋಗುವತನಕ ಕಾಯಿಪಲ್ಲೆ ಮಾರಾಟಕ್ಕೆ ಹತ್ತಿ ಮಾರ್ಕೆಟ್‌ ತಾತ್ಕಾಲಿಕ ಎಂದು ಹೇಳುತ್ತಲೇ ಬರಲಾಗಿದೆ. ಆದರೆ, ಗ್ರಾಮೀಣ ರೈತರ ಅನುಕೂಲಕ್ಕಾಗಿ ತಾತ್ಕಾಲಿಕವಾಗಿಯೂ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತಿಲ್ಲ. ತಾಜಾ ತರಕಾರಿ ಖರೀದಿಸುವುದಕ್ಕಾಗಿ ಸಾಮಾನ್ಯ ಜನರು ಕೂಡಾ ರೈತ ಸಂತೆಗೆ ಹೋಗಿ ಬರುತ್ತಾರೆ. ನಗರದಲ್ಲಿ ಜನದಟ್ಟಣೆ ತಪ್ಪಿಸುವುದಕ್ಕಾಗಿ ರೈತ ಸಂತೆ ಸ್ಥಳಾಂತರ ಮಾಡಿದ್ದರೂ ಉದ್ದೇಶ ಈಡೇರಿಲ್ಲ. ಅಲ್ಲಿಯೂ ನಿತ್ಯ ದಟ್ಟಣೆ ಇದ್ದೇ ಇರುತ್ತದೆ. ನಗರದಲ್ಲಿ ಮಾರ್ಕಿಂಗ್‌ ಮಾಡಿದರೆ, ಅಂತರ ಕಾಪಾಡಲು ಸಾಧ್ಯವಾಗುತ್ತದೆ.

ADVERTISEMENT

ನಗರದಲ್ಲಿರುವ ರೈತ ಮಾರುಕಟ್ಟೆಯು ಬಳಕೆಯಿಲ್ಲದೆ ತಿಪ್ಪೆಯಂತಾಗಿದೆ. ಬಿಡಾಡಿ ದನಗಳು, ಬೀದಿನಾಯಿಗಳು, ಹಂದಿಗಳಿಗೆ ಆಶ್ರಯ ತಾಣವಾಗಿದೆ. ಜನರು ಕಾಯಿಪಲ್ಲೆ ಮಾರುಕಟ್ಟೆಯ ಬಯಲಿನಲ್ಲೇ ಶೌಚ ಮಾಡುತ್ತಿದ್ದು, ವಾತಾವರಣ ದುರ್ನಾತಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.