ಮಸ್ಕಿ: ತಾಲ್ಲೂಕಿನ ಮುದಬಾಳ ಕ್ರಾಸ್–ಮಾರಲದಿನ್ನಿ ರಸ್ತೆ ಡಾಂಬರು ಹಾಕಿದ ದಿನವೇ ಕಿತ್ತು ಹೋಗಿದೆ.
ಕಳಪೆ ಕಾಮಗಾರಿ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಟಗಲ್, ಉಸ್ಕಿಹಾಳ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಬಂದ್ ಮಾಡಿಸಿ ರಸ್ತೆ ಮೇಲೆಯೇ ಧರಣಿ ನಡೆಸಿದರು.
ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದಿಂದ ಬಿಆರ್ಜಿಎಫ್ ಯೋಜನೆಯ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವ ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ.
‘ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಡಾಂಬರೀಕರಣಕ್ಕೂ ಮೊದಲು ಮೆಟಲಿಂಗ್ ಮಾಡಿ ರೂಲಿಂಗ್ ಮಾಡಬೇಕು ಎಂದು ಅಂದಾಜು ಪಟ್ಟಿಯಲ್ಲಿ ತಿಳಿಸಲಾಗಿದೆ. ಬೇಕಾಬಿಟ್ಟಿಯಾಗಿ ಮೆಟಲಿಂಗ್ ಮಾಡಿ ಸರಿಯಾಗಿ ನೀರು ಹಾಕಿ ರೂಲಿಂಗ್ ಮಾಡದೇ ರಾತ್ರೋರಾತ್ರಿ ಮಣ್ಣಿನ ಮೇಲೆ ಡಾಂಬರು ಹಾಕಿ ಕೈತೊಳೆದುಕೊಳ್ಳಲಾಗಿದೆ. ಈ ಕುರಿತು ಪ್ರಶ್ನಿಸಿದರೆ ಮ್ಯಾನೇಜರ್ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಇಲಾಖೆ ಎಂಜಿನಿಯರ್ ತ್ರಿವೇಣಿ ರಸ್ತೆ ಕಾಮಗಾರಿ ಬಂದ್ ಮಾಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.