ಹಟ್ಟಿ ಚಿನ್ನದ ಗಣಿ: ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕನಗನೂರು ಗ್ರಾಮದ ಸುಕನ್ಯ ಮಹಾವೀರ ಸಿಂಗ್ (50) ನರೇಗಾ ಕೆಲಸ ಮಾಡುವಾಗ ಮೃತಪಟ್ಟ ಘಟನೆ ಭಾನುವಾರ ಜರುಗಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶಿವರಾಜ ದೇಸಾಯಿ ಅವರ ಜಮೀನಿನಲ್ಲಿ ಹೂಳು ಎತ್ತುವ ಕೆಲಸ ಮಾಡುವಾಗ ಮಹಿಳೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಗ್ರಾ.ಪಂ ಬಿಎಫ್ಟಿ ಶಿವಪುತ್ರ ಅವರು ಹಾಜರಾತಿ ಹಾಕುವಾಗ ಸ್ಥಳದಲ್ಲೇ ಇದ್ದರು. ಮೃತರಿಗೆ ಒಬ್ಬ ಪುತ್ರ, ತಾಯಿ, ಸಹೋದರರು ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸರ್ಕಾರದಿಂದ ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಒದಗಿಸಬೇಕು ಎಂದು ಉದ್ಯೋಗ ಖಾತ್ರಿ ಕೂಲಿಕಾರರ ಸಂಘ ಟಿಯುಸಿಐ ಪದಾಧಿಕಾರಿಗಳು ಒತ್ತಾಯ ಮಾಡಿದ್ದಾರೆ.
ಭರವಸೆ: ಮಹಿಳೆ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಜೆಇ ರಾಘವೇಂದ್ರ ಹಾಗೂ ಗ್ರಾ.ಪಂ ಕರವಸೂಲಿಗಾರ ವೆಂಕಪ್ಪ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಘಟನೆಯ ಮನವಿಪತ್ರ ಸ್ವೀಕರಿಸಿ ನಂತರ ಮಾತನಾಡಿದ ಜೆಇ ರಾಂಘವೇಂದ್ರ, ‘ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಜತೆ ಚರ್ಚಿಸಿ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಡಲಾಗುವುದು. ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಬಾಬುಸಿಂಗ್, ಅಮರಯ್ಯ ಸ್ವಾಮಿ, ಮೌನೇಶ ಅಮರೇಶ, ನಾಗರಾಜ, ಗ್ಯಾನಮೂರ್ತಿ, ಶಿವರಾಜ, ಗುರುರಾಜ, ಮೌನೇಶ ಸೇರಿದಂತೆ ಚಿಕ್ಕನಗನೂರು ಗ್ರಾಮಸ್ಧರು ಉಪಸ್ಧಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.