ರಾಯಚೂರು: ಜಿಲ್ಲೆಯಲ್ಲಿ ಮೇ 5 ರಂದು ಮಧ್ಯಾಹ್ನ 12:28 ಶೂನ್ಯ ನೆರಳು ವಿದ್ಯಮಾನ ನಡೆಯಿತು. ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಪ್ರಾತ್ಯಕ್ಷಿಕೆಯ ಮೂಲಕ ಇದನ್ನು ಸೆರೆ ಹಿಡಿಯಲಾಯಿತು.
ಈ ವಿದ್ಯಮಾನ ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಹಾದು ಹೋಗುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ.
ಸೂರ್ಯನು ನಮ್ಮ ಪ್ರದೇಶಕ್ಕೆ ಲಂಬವಾಗಿ ಚಲಿಸಿದಾಗ ಪ್ರತಿ ವಸ್ತುವಿನ ನೆರಳು ಅಕ್ಕಪಕ್ಕ ಕಾಣಿಸಿಕೊಳ್ಳದೇ ಅದರ ಪಾದದಡಿಯಲ್ಲಿ ಮೂಡುವುದರಿಂದ ಕ್ಷಣಕಾಲ ನೆರಳು ನಮಗೆ ಗೋಚರವಾಗುವುದಿಲ್ಲ. ಈ ಅಪರೂಪದ ವಿದ್ಯಮಾನವು ರಾಯಚೂರು ಜಿಲ್ಲೆಯಲ್ಲಿ ಪುನಃ ಕಾಣಸಿಗುವುದು ಅಗಸ್ಟ್ ಎರಡನೇ ವಾರದಲ್ಲಿ.
ಮಧ್ಯಾಹ್ನದ ಸಮಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕಂಡಂತೆ ಭಾಸವಾದರೂ ವಾಸ್ತವದಲ್ಲಿ ಆತ ನೇರವಾಗಿ ನಮ್ಮ ನೆತ್ತಿಯ ಮೇಲಿರದ ಕಾರಣ ಪ್ರತಿದಿನವೂ ಶೂನ್ಯ ನೆರಳಿನ ದಿನವಾಗಲು ಸಾಧ್ಯವಿಲ್ಲ. ಈ ವಿದ್ಯಮಾನವನ್ನು ನಿಗದಿತ ದಿನದಂದು ಮಧ್ಯಾಹ್ನ 12 ರಿಂದ 12.30 ರ ಒಳಗೆ ಯಾವುದೇ ವಸ್ತುಗಳನ್ನು ನೆಲಕ್ಕೆ ಲಂಬವಾಗಿ ಇರಿಸಿದಾಗ, ಆ ವಸ್ತುಗಳ ನೆರಳಿನ ಉದ್ದ ಕಡಿಮೆಯಾಗುತ್ತ ನಿಗದಿತ ಸಮಯಕ್ಕೆ ಶೂನ್ಯ ನೆರಳು ಸಂಭವಿಸುವುದನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದಾಗಿ ಸರ್ಕಾರವು ಲಾಕ್ಡೌನ್ ಘೋಷಿಸಿರುವ ಕಾರಣ ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ನಿರ್ಬಂಧಿಸಿರುವ ಕಾರಣ ವಿಜ್ಞಾನ ಕೇಂದ್ರದ ಸಿಬ್ಬಂದಿ ಮಾತ್ರ ವಿದ್ಯಮಾನವನ್ನು ಸೆರೆಹಿಡಿಯುವಲ್ಲಿ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.