ADVERTISEMENT

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮ

ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪುರುಷೋತ್ತಮ್‌ ಆರ್‌. ಪಟೇಲ್‌

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 6:51 IST
Last Updated 11 ಜೂನ್ 2018, 6:51 IST

ಮಾಗಡಿ: ಆರೋಗ್ಯವೇ ಭಾಗ್ಯ ಎಂಬ ಅನುಭವಿಗಳ ಮಾತಿನಂತೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದಾಗಿ ರಾಜ್‌ ಲಕ್ಷ್ಮೀವುಡ್‌ ಇಂಡಸ್ಟ್ರೀಸ್‌ ಮಾಲೀಕ ಪುರುಷೋತ್ತಮ್‌ ಆರ್‌.ಪಟೇಲ್‌ ತಿಳಿಸಿದರು.

ರಾಜ್‌ ಲಕ್ಷ್ಮೀವುಡ್‌ ಇಂಡಸ್ಟ್ರೀಸ್‌ ಮತ್ತು ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ನಡೆದ ‘ಉಚಿತ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರ’ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಬಡವರು ರೋಗ ಬಂದಾಗ ಆರಂಭದಲ್ಲಿಯೇ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳದೆ ನರಳುವುದನ್ನು ಗಮನಿಸಿದ್ದೇವೆ. ಆರೋಗ್ಯವೇ ಭಾಗ್ಯ ಎಂಬ ಅರಿವು ಮೂಡಿಸಲು ವಿದ್ಯಾ ಸಂಸ್ಕಾರ್‌ ಕಾಲೇಜಿನ ಸಹಯೋಗದಲ್ಲಿ ಆರೋಗ್ಯ ಶಿಬಿರಗ
ಳನ್ನು ನಡೆಸಲಾಗುವುದು ಎಂದರು.

ADVERTISEMENT

‘ನಮ್ಮ ತಾಯಿ ನಾನ್‌ಬೇನ್‌ ರತನ್‌ಸಿ ಪಟೇಲ್‌ ಮಾನವರ ಸೇವೆಯೇ ಮಹಾದೇವನ ಸೇವೆ ಎಂಬ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಬಡವರ ಸೇವೆ ಮಾಡಿಕೊಂಡು ಬಂದವರು. ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಕ್ರೀಡೆ, ಆರೋಗ್ಯ ಸುಧಾರಣೆ,ಪರಿಸರ ಸಂರಕ್ಷಣೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತೇವೆ’ ಎಂದರು.

‘ಸೋಮೇಶ್ವರ ಸ್ವಾಮಿ ದೇವರ ರಥೋತ್ಸವದಂದು ಸೋಮೇಶ್ವರ ಸ್ವಾಮಿ ಅರವಟಿಗೆಯಲ್ಲಿ, ಭಕ್ತರ ಜೊತೆಗೂಡಿ ಅನ್ನದಾನ ಮಾಡುತ್ತಿದ್ದೇವೆ. ದೇವಾಲಯದ ಪೌಳಿಯ ಒಳಗೆ ಹಸಿರು ಬೆಳೆಸಿ, ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಹಾಕಿಸಿದ್ದೇವೆ. ಸೇವೆ ಮಾಡುವ ಉದ್ದೇಶದಿಂದ ಆರೋಗ್ಯ ಶಿಬಿರ ನಡೆಸುತ್ತಿದ್ದೇವೆ’ ಎಂದು ಸವಿತಾ ಆರ್‌. ಪಟೇಲ್‌ ತಿಳಿಸಿದರು.

ಕರ್ನಾಟಕ ಕಛ್‌ ಕಡವಾ ಪಾಟೀದಾರ್‌ ಪರಿವಾರ ಸಮಾಜದ ಅಧ್ಯಕ್ಷ ಧಾಮ್‌ಜಿ ಭಾಯಿ ಡಿ.ಪಟೇಲ್‌ ಮಾತನಾಡಿ, ಕನ್ನಡ ನಾಡು ಧರ್ಮ ಕಲೆಗಳ ತವರೂರು. ಕನ್ನಡಿಗರ ಔದಾರ್ಯ, ಅವರ ಸೌಹಾರ್ದಭಾವನೆ ಅನುಕರಣೀಯವಾದುದು. ಸಿರಿವಂತರು ಬಡವರ ಸೇವೆ ಮಾಡಲು ಮುಂದಾಗಬೇಕು. ಪರೋಪಕಾರವೇ ನಮ್ಮ ಜೀವನದ ಮಹತ್ವದ ತತ್ವವಾಗಿದೆ ಎಂದು ಅವರು ಹೇಳಿದರು.

ಕಛ್‌ ಕಡವಾ ಪಾಟೀದಾರ್‌ ಪರಿವಾರಸಮಾಜದ ಪ್ರಧಾನ ಕಾರ್ಯದರ್ಶಿ ರಮೇಶ್‌.ಎಂ. ಪಟೇಲ್‌ ಶುಭಕೋರಿದರು.

ರಮೇಶ್‌ ಆರ್‌.ಪಟೇಲ್‌, ರೇಖಾ ಆರ್‌.ಪಟೇಲ್‌, ಗೋವಿಂದ್‌ ಆರ್‌.ಪಟೇಲ್‌, ಗಂಗಾ ಜಿ.ಪಟೇಲ್‌, ಜಿತೇಂದ್ರ. ಆರ್‌. ಪಟೇಲ್‌, ಲೀಲಾ ಜೆ.ಪಟೇಲ್‌, ರಮೇಶ್‌ ಎಂ.ವಾಗಾಡಿ, ಲಾಲ್‌ಜಿ ಬಾಯಿ ಎಂ.ಪಟೇಲ್‌, ಯುವಕ ಮಂಡಲದ ಅಧ್ಯಕ್ಷ ವಿನೋದ್‌ ಎಂ.ಪಟೇಲ್‌, ಘನಶ್ಯಾಮ್‌ ಪಟೇಲ್‌, ಅರಿಹಂತ್‌ ಮೆಡಿಕಲ್ಸ್‌ ರಿಸರ್ಚ್‌ ಸೆಂಟರ್‌ನ ಮಾಲೀಕ ದಿಲೀಪ್‌ ಜೈನ್‌ ಆರೋಗ್ಯ ಮತ್ತು ಮಾನವನ ಬದುಕಿನ ಬಗ್ಗೆ ಮಾತನಾಡಿದರು.

ಶೇಷಾದ್ರಿಪುರಂ ಅಪೋಲೊ ಆಸ್ಪತ್ರೆಯ ಡಾ.ಪ್ರದೀಪ್‌ ಹೊಸಮನಿ, ಡಾ.ಸ್ವಪ್ನ, ಡಾ.ಅರ್ಜುನ್‌, ಡಾ.ಹೇಮಾ, ಡಾ.ಪವನ್‌, ಡಾ.ಶ್ರೀಪ್ರಕಾಶ್‌, ಡಾ.ವರುಣ್‌ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು. ಹೃದ್ರೋಗ ತಪಾಸಣೆ, ಇಸಿಜಿ,2ಡಿ ಎಕೊ, ಕಿವಿ, ಗಂಟಲು, ಮೂಗು, ಸ್ತ್ರೀರೋಗ, ದಂತ ತಪಾಸಣೆ, ಮಧುಮೇಹ, ಮೂಳೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

ತಿರುಪತಿ ಪಾದಯಾತ್ರೆ ಸಮಿತಿಯ ಶಾರದಾ ಸುರೇಶ್‌, ಸೋಮೇಶ್ವರ ಸ್ವಾಮಿ ಅನ್ನಸಂತರ್ಪಣಾ ಸಮಿತಿಯ ಎಂ.ಜಿ.ಗೋಪಾಲ್‌, ವಿಜಯಾ ದೀಕ್ಷಿತ್‌, ವೆಂಕಟಾದ್ರಿ ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಪುರುಷೋತ್ತಮ್‌ ಆರ್‌.ಪಟೇಲ್‌ ಕುಟುಂಬದ ಸದಸ್ಯರು ಮತ್ತು ಬೆಂಗಳೂರಿನ ವಿದ್ಯಾ ಸಂಸ್ಕಾರ್‌ ಕಾಲೇಜಿನ ಪ್ರಾಂಶುಪಾಲ ಸತೀಶ್‌ ಬೆಜ್ಜಿಹಳ್ಳಿ ಹಾಗೂ ವಿದ್ಯಾರ್ಥಿಗಳು ಶಿಬಿರದಲ್ಲಿ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು.

ಪಟ್ಟಣ ಮತ್ತು ತಾಲ್ಲೂಕಿನ ವಿವಿದೆಢೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳುಶಿಬಿರದಲ್ಲಿ ಭಾಗವಹಿಸಿ ಅನುಕೂಲ ಪಡೆದುಕೊಂಡರು. ಎಲ್ಲರಿಗೂ ಉಚಿತ ತಿಂಡಿ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಿತು.

ಶಿಬಿರದ ಕುರಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ, ತಾಲ್ಲೂಕು ಥಿಯೋಸಪಿಕಲ್‌ ಸೋಸೈಟಿ ಅಧ್ಯಕ್ಷ ಹನುಮಂತಯ್ಯ, ನಿವೃತ್ತ ಮುಖ್ಯಶಿಕ್ಷಕ ವಿ.ನರಸಿಂಹಯ್ಯ ಮೆಚ್ಚುಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.