ರಾಮನಗರ: ಜಿಲ್ಲೆಯಲ್ಲಿನ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಆಡಳಿತ ಮಂಡಳಿಯ ಆಯ್ಕೆಗಾಗಿ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಬುಧವಾರ ಇನ್ನಿಲ್ಲದ ಪೈಪೋಟಿ ಕಂಡುಬಂದಿತು.
ರಾಮನಗರ ಎಪಿಎಂಸಿಯಿಂದ ಆಯ್ಕೆ ಬಯಸಿ ಕಡೆಯ ದಿನದಂದು ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾದವು. ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದರು. ಗುರುವಾರ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ವಾಪಸ್ ಪಡೆಯಲು 7ರಂದು ಕಡೆಯ ದಿನವಾಗಿದೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಕೈಲಾಂಚ ಕ್ಷೇತ್ರದಿಂದ ಕೆಂಪರಾಜು, ಕವಣಾಪುರ ಶಿವರಾಜು, ಬಿಳಗುಂಬ ಕ್ಷೇತ್ರದಿಂದ ಕುರುಬರಳ್ಳಿ ಮಂಚಶೆಟ್ಟಿ, ಬಿಡದಿ ಕ್ಷೇತ್ರದಿಂದ ಗೋಪಾಲರಾಜು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜು, ಕೆ.ಚಂದ್ರಶೇಖರಯ್ಯ ನಾಮಪತ್ರ ಸಲ್ಲಿಸಿದರು. ಬಾನಂದೂರು ಎಸ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಎಂ.ನಾರಾಯಣಪ್ಪ ನಾಮಪತ್ರ ಸಲ್ಲಿಸಿದರು.
ಬಿಡದಿ ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ರಮೇಶ್ ನಾಮಪತ್ರ ಸಲ್ಲಿಸಿದ್ದರೆ, ಬಾನಂದೂರು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂಬಂಧ ಗೊಂದಲ ಉಂಟಾಯಿತು. ಮೊದಲಿಗೆ ರಾಮಣ್ಣ ಎಂಬುವರ ಹೆಸರು ಕೇಳಿಬಂದಿದ್ದು, ಕೊನೆಯ ಕ್ಷಣದಲ್ಲಿ ಲಕ್ಕಪ್ಪ ಎಂಬುವರು ನಾಮಪತ್ರ ನೀಡಿ ಅಚ್ಚರಿ ಮೂಡಿಸಿದರು.
ಬಿಡದಿ ಕ್ಷೇತ್ರಕ್ಕೆ ರಾಂಪುರ ಗೋಪಾಲ್, ಕೂಟಗಲ್ನಿಂದ ಜಗದೀಶ್, ಕೈಲಾಂಚ ಕ್ಷೇತ್ರಕ್ಕೆ ಲಿಂಗೇಗೌಡ, ವರ್ತಕರ ಕ್ಷೇತ್ರದಿಂದ ಮುತಾಹಿರ್, ಬಿಳಗುಂಬ ಕ್ಷೇತ್ರ ಚಿಕ್ಕಣ್ಣಾಚಾರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಉಮೇದುವಾರಿಕೆ ಸಲ್ಲಿಸಿದರು.
‘ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸದಸ್ಯ ಮತ್ತು ಕೃಷಿ ಹುಟ್ಟುವಳಿ ಸಹಕಾರ ಸಂಸ್ಕರಣಾ ಸಂಘಗಳ ಕ್ಷೇತ್ರಕ್ಕೆ ಯಾರು ನಾಮಪತ್ರ ಸಲ್ಲಿಸಿಲ್ಲ’ ಎಂದು ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.