ರಾಮನಗರ: ಬಿಡದಿ ಬಳಿಯ ಚಾಮುಂಡೇಶ್ವರಿ ಬಿಲ್ಡ್ಟೆಕ್ ಕಂಪೆನಿ (ಈಗಲ್ಟನ್) ಒತ್ತುವರಿ ಮಾಡಿದ್ದ ಸರ್ಕಾರಿ ಭೂಮಿಯಲ್ಲಿ 71.16 ಎಕರೆ ಜಮೀನಿಗೆ ಮಾರುಕಟ್ಟೆ ಮೌಲ್ಯವಾಗಿ 82.70 ಕೋಟಿ ರೂಪಾಯಿಗಳನ್ನು ರಾಮನಗರ ಜಿಲ್ಲಾಡಳಿತ ನಿಗದಿಪಡಿಸಿದೆ.
ಕೆಲವೆಡೆ ಎಕರೆಗೆ ರೂ 1.20 ಕೋಟಿ, ಇನ್ನೂ ಕೆಲವೆಡೆ ಎಕರೆಗೆ 83 ಲಕ್ಷ ರೂಪಾಯಿ ಎಂದು ಮೌಲ್ಯವನ್ನು ಜಿಲ್ಲಾಡಳಿತ ಅಂತಿಮಗೊಳಿಸಿದೆ. ಸಚಿವ ಸಂಪುಟ ನಿರ್ಧಾರ ಹಾಗೂ ಫೆಬ್ರುವರಿ 25ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಅನ್ವಯ ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ ಈ ಜಮೀನಿಗೆ ಮಾರುಕಟ್ಟೆ ಮೌಲ್ಯ ನಿಗದಿಪಡಿಸಿ ಬುಧವಾರ ಈಗಲ್ಟನ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ನೀಡಿದ್ದಾರೆ.
ಈಗಲ್ಟನ್ ಸಂಸ್ಥೆಯು ಬಿಡದಿ ಹೋಬಳಿಯ ಶ್ಯಾನುಮಂಗಲ, ಬಿಲ್ಲಕೆಂಪನಹಳ್ಳಿ ಮತ್ತು ಬಾನಂದೂರು ಗ್ರಾಮಗಳ ವಿವಿಧ ಸರ್ವೇ ನಂಬರ್ಗಳಲ್ಲಿ ವರ್ಗೀಕರಣಗೊಂಡಿರುವ ಗೋಮಾಳ, `ಎ~ ಖರಾಬು ಮತ್ತು `ಬಿ~ ಖರಾಜು ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿದೆ. ಇದು ಒತ್ತುವರಿ ಮಾಡಿರುವ ಪ್ರದೇಶದಲ್ಲಿ 71.16 ಎಕರೆ ಸರ್ಕಾರಿ ಜಮೀನಿಗೆ ಸರ್ಕಾರಿ ಆದೇಶದಂತೆ ದರ ನಿಗದಿಪಡಿಸಿ ಮಂಜೂರು ಮಾಡಲು ಆದೇಶಿಸಿರುವುದಾಗಿ ಜಿಲ್ಲಾಧಿಕಾರಿ ಪುಟ್ಟಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.
ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 9(1)ರ ಅಡಿಯಲ್ಲಿ ಹಾಗೂ ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(4)ರ ಅಡಿಯಲ್ಲಿ ಗೋಮಾಳ ಲೆಕ್ಕ ಶೀರ್ಷಿಕೆಯಿಂದ ತಗ್ಗಿಸಿಕೊಂಡು ಮಂಜೂರು ಮಾಡಲು ಆದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95(2)ರಂತೆ ಭೂ ಪರಿವರ್ತನೆ ಶುಲ್ಕವಾಗಿ ಎಕರೆಗೆ ತಲಾ ರೂ 1,30,680 ರೂಪಾಯಿಯನ್ನು ಇವರು ಪಾವತಿಸಬೇಕಿದೆ. ಇದನ್ನೂ ಒಟ್ಟು ಮೊತ್ತದಲ್ಲಿ ಸೇರಿಸಲಾಗಿದೆ ಎಂದರು. ಪ್ರಸಕ್ತ ಸಾಲಿನ ಮಾರುಕಟ್ಟೆ ದರವನ್ನು ಈ ಜಮೀನಿಗೆ ನಿಗದಿಪಡಿಸಲಾಗಿದೆ.
ನೋಟಿಸ್ ನೀಡಿದ ಏಳು ದಿನದೊಳಗೆ ಸದರಿ ಮೊತ್ತವನ್ನು ಸಂಬಂಧಿಸಿದವರು ಸರ್ಕಾರಕ್ಕೆ ಜಮಾ ಮಾಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಕರಣದ ವಿವರ: ಬಿಡದಿ ಹೋಬಳಿಯಲ್ಲಿ ಈಗಲ್ಟನ್ ಸಂಸ್ಥೆಯು ಒಟ್ಟಾರೆ 509 ಎಕರೆ ಭೂಮಿಯನ್ನು ಹೊಂದಿದೆ. ಅದರಲ್ಲಿ 132.26 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದೆ. ಈ ವಿವಾದದ ಸಲುವಾಗಿ ಹೈಕೋರ್ಟ್ ಸರ್ಕಾರದ ಪರ ತೀರ್ಪು ನೀಡಿತ್ತು. ಒತ್ತುವರಿದಾರರಿಂದ ಭೂಮಿ ವಶಪಡಿಸಿಕೊಂಡು, ದಂಡ ವಿಧಿಸುವಂತೆ ಸೂಚಿಸಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಈಗಲ್ಟನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
132.26 ಎಕರೆಯಲ್ಲಿ ಒಟ್ಟಾರೆ 71.16 ಎಕರೆ ಜಮೀನಿಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಆ ನಂತರ ಸುಪ್ರೀಂ ಕೋರ್ಟ್ ಈ ಭೂ ವಿವಾದವನ್ನು ಬಗೆಹರಿಸಿಕೊಳ್ಳಲು ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ಸಂಪುಟ ಸಭೆ ಎರಡು ಬಾರಿ ಪರಿಶೀಲನೆ ನಡೆಸಿ, ಒತ್ತುವರಿ ಭೂಮಿಯನ್ನು ಅದೇ ಸಂಸ್ಥೆಗೆ ಮಾರುಕಟ್ಟೆ ಮೌಲ್ಯದ ಅನ್ವಯ ಮಂಜೂರು ಮಾಡಲು ನಿರ್ಧರಿಸಿತ್ತು. ಅದರಂತೆ ಸರ್ಕಾರಿ ಆದೇಶವೂ ಹೊರಬಿತ್ತು.
ಇವುಗಳ ಆಧಾರದ ಮೇಲೆ ಇದೀಗ ದರ ನಿಗದಿಪಡಿಸಿರುವುದಾಗಿಡಿ.ಸಿ ತಿಳಿಸಿದರು.
ಈ ಸಂಸ್ಥೆ ಒತ್ತುವರಿ ಮಾಡಿಕೊಂಡಿರುವ ಉಳಿದ 61.10 ಎಕರೆ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪಿನಂತೆ ನಡೆದುಕೊಳ್ಳಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.