ADVERTISEMENT

ಕಂದಾಯ ಇಲಾಖೆ ರೈತರ ಮನೆಬಾಗಿಲಿಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:23 IST
Last Updated 16 ಡಿಸೆಂಬರ್ 2017, 6:23 IST

ಕನಕಪುರ: ಸಾಕಷ್ಟು ವರ್ಷಗಳಿಂದ ರೈತರ ಪಹಣಿಯಲ್ಲಿ ಸಮಸ್ಯೆಗಳಿರುವುದನ್ನು ಗಮನಿಸಿರುವ ರಾಮನಗರ ಜಿಲ್ಲಾಡಳಿತ ಅದನ್ನು ಪರಿಹರಿಸಲು ಕಂದಾಯ ರೈತರ ಮನೆಬಾಗಿಲಿಗೆ ಎಂಬ ವಿನೂತನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ. ಡಾ.ಬಿ.ಆರ್‌. ಮಮತ ತಿಳಿಸಿದರು.

ಕಸಬಾ ಹೋಬಳಿ ಚಿಕ್ಕಮುದುವಾಡಿ ಮತ್ತು ಅಳ್ಳಿಮಾರನಹಳ್ಳಿ ಗ್ರಾಮ ವ್ಯಾಪ್ತಿಯ ಗಾಣಾಳು ಗ್ರಾಮ ಮತ್ತು ಕಾಲೊನಿಗಳಿಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು.

ರೈತರು ತಾಲ್ಲೂಕು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನೇ ರೈತರ ಮನೆ ಬಾಗಿಲಿಗೆ ಕಳುಹಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ ಎಂದರು.

ADVERTISEMENT

ಖಾತೆದಾರರ ಹೆಸರು ತಿದ್ದುಪಡಿ, ವಿಸ್ತೀರ್ಣ ತಿದ್ದುಪಡಿ, ಬೆಳೆ ತಿದ್ದುಪಡಿ, ಪೌತಿಖಾತೆ, ವಿಭಾಗ ಪತ್ರದಂತೆ ಖಾತೆ, ಹಳೆಯ ದಾನ ಪತ್ರ/ವಿಲ್ ಪತ್ರದಂತೆ ಖಾತೆ, ಪೋಡಿ, ಹಳೆಯ ಕ್ರಯಪತ್ರದಂತೆ ಖಾತೆ, ಹಿಸ್ಸಾ/ಪೋಡಿ ಅದಲು-ಬದಲು, ಇಂಡೀಕರಣವಾಗದೆ ಇರುವ ಪ್ರಕರಣಗಳು, ಸಾಗುವಳಿ ಚೀಟಿಯಂತೆ ಖಾತೆ ಹಾಗೂ ಇತರೆ ಪ್ರಕರಣಗಳ ಸಮಸ್ಯೆಗಳನ್ನು ಬಗೆಹರಿಸಲು ಕಂದಾಯ ಇಲಾಖೆಯ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಿಗರು ಹಾಗೂ ಅಧಿಕಾರಿಗಳು ರೈತರ ಮನೆ ಮನೆಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ನೀಡಿ ಅವರ ಜಮೀನಿನ ಸಮಸ್ಯೆ ಬಗೆಹರಿಸುವ ಪ್ರಯತ್ನವಾಗಿದೆ. ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ
ಜಾರಿಗೊಳಿಸಲಾಯಿತು. ಅದರ ಯಶಸ್ಸಿನಿಂದ ಕನಕಪುರ ತಾಲ್ಲೂಕಿನಾದ್ಯಂತ ಈ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ ಎಂದರು.

ಮೊದಲಿಗೆ ಪೋಡಿ ಮುಕ್ತ ಗ್ರಾಮ ಅಭಿಯಾನ ಚಾಲನೆಯಲ್ಲಿರುವ ಚಿಕ್ಕಮುದವಾಡಿಯಲ್ಲಿನ ರಾಜಶೇಖರ್ ಅವರ ಮನೆಗೆ ತೆರಳಿದ ಜಿಲ್ಲಾಧಿಕಾರಿ ಈ ಯೋಜನೆ ಸದುಪಯೋಗ ಪಡಿಸಿಕೊಂಡು ಸಮಸ್ಯೆ ಅಥವಾ ದಾಖಲಾತಿಗಳನ್ನು ಬಗೆಹರಿಸಿಕೊಳ್ಳುವಂತೆ ತಿಳಿಸಿದರು.

ನಂತರ ಹಲವು ಗ್ರಾಮಸ್ಥರ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕಂದಾಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿರುವ ಈ ಯೋಜನೆಯಡಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಬರುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡರು.

ಸರ್ಕಾರದ ಸೌಲಭ್ಯಗಳು ಜನರಿಗೆ ತಲುಪುತ್ತಿರುವ ಬಗ್ಗೆಯೂ ಖಾತ್ರಿ ಪಡಿಸಿಕೊಳ್ಳಲು ಅಂಗವಿಕಲರು, ಹಿರಿಯ ನಾಗರಿಕರನ್ನು ಭೇಟಿ ಮಾಡಿ ಮಾಸಾಶನ ತಲುಪುತ್ತಿರುವ ಬಗ್ಗೆ ವಿಚಾರಿಸಿದರು.

ಅಳ್ಳಿಮಾರನಳ್ಳಿಗೆ ಭೇಟಿ ನೀಡಿ ಗ್ರಾಮದಲ್ಲಿರುವ 186 ಕುಟುಂಬಗಳು, ರೈತರು 480 ಎಕರೆ ಪ್ರದೇಶಗಳಲ್ಲಿ ಬೆಳೆದಿರುವ ಬೆಳೆಗಳ ಬಗ್ಗೆ ಮಾಹಿತಿ, ಕೆರೆಕಟ್ಟೆಗಳು ತುಂಬಿರುವ ಬಗ್ಗೆ ಆ ಗ್ರಾಮದಲ್ಲಿರುವ 89 ಬೋರ್‍ವೆಲ್‍ಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಗಾಣಾಳು ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಜಯಮ್ಮ, ದಾಸೇಗೌಡ ಅವರಿಂದ ಕಟಾವು ಮಾಡಿದ ನಂತರ ಭತ್ತ, ರೇಷ್ಮೆ ಮೊದಲಾದ ಬೆಳೆಗಳಿಗೆ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರಿಗೆ ತಿಳಿಸಿದರು.

ತಹಶೀಲ್ದಾರ್ ಆರ್‌. ಯೋಗಾನಂದ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಚಿಕ್ಕಮುದವಾಡಿ, ಅಳ್ಳಿಮಾರನಹಳ್ಳಿ ಗ್ರಾಮಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.