ADVERTISEMENT

ಕನಕಪುರ ತಾಲ್ಲೂಕಿನಲ್ಲಿ ಖಾಸಗಿ ವಿದ್ಯಾ ಸಂಸ್ಥೆಚುನಾವಣೆ....

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಕನಕಪುರ: ವಿದ್ಯಾ ಸಂಸ್ಥೆಯೊಂದರ ಆಡಳಿತ ಮಂಡಳಿ ಚುನಾವಣೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ, ಕಲ್ಲು ತೂರಾಟವಾಗಿದ್ದು, ಗಲಭೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕನಕಪುರ ತಾಲ್ಲೂಕು ಉಯ್ಯಂಬಳ್ಳಿ ಹೋಬಳಿ ಕೃಷ್ಣಯ್ಯನದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆದಿದೆ.

280 ಸದಸ್ಯರನ್ನೊಳಗೊಂಡ ಕೃಷ್ಣಯ್ಯನದೊಡ್ಡಿಯ ಅನುದಾನಿತ ವಿಶ್ವೋದಯ ವಿದ್ಯಾ ಸಂಸ್ಥೆಗೆ ಶನಿವಾರ ಮತದಾನ ನಡೆಯಿತು. ಈ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಚಾರ್ಜ್ ಮಾಡಿದರು.
ಘಟನೆಯ ಹಿನ್ನಲೆ: ಸರ್ಕಾರಿಕ ಅನುದಾನಿದ ವಿಶ್ವೋದಯ ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯೊಂದರ ನೆರವಿನಿಂದ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಬಾರಿ ಆಡಳಿತ ಮಂಡಳಿ ವಿಷಯದಲ್ಲಿ ರಾಜಕೀಯ ಬೆರೆಯಿತು. ಮಂಡಳಿಯ ಸದಸ್ಯರಲ್ಲಿ ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಸದಸ್ಯರಿದ್ದರು.

ಹಾಗಾಗಿ ಎರಡೂ ಪಕ್ಷವರು ಮಂಡಳಿ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಹಗ್ಗಜಗ್ಗಾಟ ಆರಂಭಿಸಿದರು. ಹೀಗಾಗಿ ಸರಳವಾಗಿ ನಡೆಯಬೇಕಾದ ಚುನಾವಣೆ, ರಾಜಕೀಯ ಚುನಾವಣೆಯಂತಾಗಿ, ಪೊಲೀಸರ ಸರ್ಪ ಕಾವಲಿನಲ್ಲಿ ನಡೆಯಬೇಕಾದ ಪರಿಸ್ಥಿತಿ ಎದುರಾಯಿತು.

ನಡೆದಿದ್ದಿಷ್ಟು: ಮೊದಲೇ ಹೇಳಿದಂತೆ ಆಡಳಿತ ಮಂಡಳಿ ಅಧಿಕಾರ ಹಿಡಿಯಲು ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ಡಿ.ಕೆ.ಶಿವಕುಮಾರ್, ಸಹೋದರ ಡಿ.ಕೆ.ಸುರೇಶ್ ಮತ್ತು ಬೆಂಬಲಿಗರೊಂದಿಗೆ ಚುನಾವಣಾ ವೇಳೆ ಶಾಲಾ ಅಂಗಳದಲ್ಲಿ ಖುದ್ದು ಹಾಜರಿದ್ದರು.

ಅದೇ ರೀತಿ ಜೆ.ಡಿ.ಎಸ್ ಕಾರ್ಯಕರ್ತರು ಜಮಾಯಿಸಿದ್ದರು. ಮತದಾನದ ವೇಳೆ ಜೆ.ಡಿ.ಎಸ್. ಬೆಂಬಲಿತರು `ತಮಗೆ ಮುಕ್ತ ಮತದಾನಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮನ್ನು ಒಳಗಡೆ ಬಿಡುತ್ತಿಲ್ಲವೆಂದು~ ಆರೋಪಿಸಿ ಧರಣಿ ಕುಳಿತರು. ಕಾಂಗ್ರೆಸ್‌ನವರೂ `ತಮಗೆ ಅನ್ಯಾಯವಾಗಿದೆ~ ಪ್ರತಿ ಧರಣಿ ನಡೆಸಿದರು. ಅರ್ಧಗಂಟೆ ನಂತರ ನಡೆದ ಧರಣಿ ಪ್ರಹಸನ ಎರಡೂ ಕೈಬಿಟ್ಟರು.

ಕೊನೆಯಲ್ಲಿ ಜೆ.ಡಿ.ಎಸ್.ನವರು ಚುನಾವಣೆಯಲ್ಲಿ ಪೋಲಿಸ್ ಅಧಿಕಾರಿಗಳು ಹಾಗು ಚುನಾವಣಾಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಎಕಪಕ್ಷೀಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿ ಹೊರ ಹೊರಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.