ರಾಮನಗರ: ‘ಕನ್ನಡ ಭಾಷೆಯು ಬಾಂಧವ್ಯ ಬೆಳೆಸುವ ಶಕ್ತಿ ಹೊಂದಿದೆ’ ಎಂದು ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಹೇಳಿದರು. ಇಲ್ಲಿನ ಬಾಲಗೇರಿಯಲ್ಲಿ ಶನಿವಾರ ರಾತ್ರಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಛತ್ರಪತಿ ಶಾಹು ಮಹಾರಾಜ ಯೂತ್ಸ್ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಪಂಚದ ಭಾಷೆಗಳ ಸಾಲಿನಲ್ಲಿ ಕನ್ನಡ ಭಾಷೆಗೆ ತನ್ನದೇ ಆದ ಐತಿಹಾಸಿಕ ಸ್ಥಾನವಿದೆ. ಆದ್ದರಿಂದ ಇಂಗ್ಲಿಷ್ ಭಾಷೆಯ ಭ್ರಮೆಗೆ ಒಳಗಾಗದೇ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಮಾಡಬೇಕಾಗಿದೆ’ ಎಂದು ತಿಳಿಸಿದರು.
ಬಿಎಸ್ಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ‘ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಆದರೆ, ಇಂದು ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಂದು ಕೊಲ್ಲಾಪುರದ ಶಾಹು ಮಹಾರಾಜರು ವಿದ್ಯಾರ್ಥಿ ವೇತನ ನೀಡುವುದರ ಮೂಲಕ ಅಂಬೇಡ್ಕರ್ ಅವರು ಉನ್ನತ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಅನುವು ಮಾಡಿಕೊಟ್ಟರು. ಇದರಿಂದ ವಿಶ್ವದಾದ್ಯಂತ ಆಡಳಿತ ವ್ಯವಸ್ಥೆ ತಿಳಿದುಕೊಳ್ಳಲು ಹಾಗೂ ಮುಂದೆ ಸಮಾನತೆಗಾಗಿ ಹೋರಾಟ ನಡೆಸಲು ಸಾಧ್ಯವಾಯಿತು’ ಎಂದರು.
ನಗರಸಭೆ ಸದಸ್ಯ ಆರ್. ಮುತ್ತುರಾಜ್, ರಾಜ್ಯ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಉಡುಪಿ ಬಾಲಕೃಷ್ಣ, ವೈದ್ಯೆ ಡಾ.ತೇಜೋವತಿ, ರಂಗಭೂಮಿ ಕಲಾವಿದ ಮೈಸೂರು ರಮಾನಂದ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ವೆಂಕಟಸ್ವಾಮಿ, ನಮ್ಮವರ ವೇದಿಕೆ ಅಧ್ಯಕ್ಷ ಎಂ.ಜಗದೀಶ್, ಕರ್ನಾಟಕ ರಕ್ಷಣೆ ವೇದಿಕೆ ಅಧ್ಯಕ್ಷ ರಾಜು, ಸಮರ್ಥ ಸೇನೆಯ ಅಧ್ಯಕ್ಷ ಎ.ಎಸ್. ಶಿವಕುಮಾರ್, ಛತ್ರಪತಿ ಶಾಹುಮಹಾರಾಜ ಯೂತ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮೂರ್ತಿ, ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಅನಿಲ್ ಜೋಗಿಂದರ್, ಬಿವಿಎಸ್ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಅರುಣ್ ಕುಮಾರ್, ರೋಹಿತ್, ಯೋಗಿ, ದುರ್ಗಪ್ರಸಾದ್, ಶರತ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.