ADVERTISEMENT

‘ಕುಮಾರಸ್ವಾಮಿ ಸಿಎಂ ಮಾಡಿದ್ದೀರಿ ನನ್ನನ್ಯಾಕೆ ಮಾಡುವುದಿಲ್ಲ’

ಜನರ ಮುಂದೆ ಹಾರೋಹಳ್ಳಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಮೇ 2018, 12:56 IST
Last Updated 6 ಮೇ 2018, 12:56 IST

‌ಕನಕಪುರ: ಬೇರೆ ಕಡೆಯಿಂದ ಬಂದಿರುವ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡುವುದಾದರೆ, ಇದೇ ಜಿಲ್ಲೆಯ ಕನಕಪುರ ತಾಲ್ಲೂಕಿನವನಾದ ನಾನು ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಪರವಾಗಿ ಬಹಿರಂಗ ಚುನಾವಣಾ ಪ್ರಚಾರ ನಡೆಸಿದ ಅವರು, ‘ರಾಜಕೀಯವಾಗಿ ನಾವು ದುಡಿದಿದ್ದೇವೆ, ನಮಗೂ ಮುಖ್ಯ ಮಂತ್ರಿ ಆಗಬೇಕೆಂಬ ಬಯಕೆಯಿದೆ, ನೀವು ಈ ಕ್ಷೇತ್ರದಲ್ಲಿ ಇಕ್ಬಾಲ್‌ ಹುಸೇನ್‌ ಗೆಲ್ಲಿಸಿದರೆ ಅದು ನಮ್ಮನ್ನು ಗೆಲ್ಲಿಸಿದಂತೆಯೇ’ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಎಲ್ಲವನ್ನು ಕೊಟ್ಟಿದೆ, ಜನತೆಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿದೆ, ನಾವು ಜನತೆಗೆ ಕೊಟ್ಟ ಮಾತಿನಂತೆ ಕೆಲಸ ಮಾಡಿದ್ದೇವೆ, ನಿಮ್ಮ ಸೇವೆಕರಾಗಿ ಕೆಲಸ ಮಾಡುತ್ತಿದ್ದೇವೆ, ನಿಮಗೆ ಸೇವಕ ಬೇಕೋ ಅಥವಾ ಎಂದೋ ಒಂದು ದಿನ ಬಂದು ಹೋಗುವ ಶಾಸಕ ಬೇಕೋ ನೀವೇ ತೀರ್ಮಾನಿಸಿ ಎಂದರು.

ADVERTISEMENT

ಚಲನಚಿತ್ರ ನಟ ಸಾಧುಕೋಕಿಲ ಮಾತನಾಡಿ, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ನೆಮ್ಮದಿಯ ಜೀವನ ಮಾಡಬಹುದು ಎಂದರು.

ಇಕ್ಬಾಲ್‌ ಹುಸೇನ್‌ ಮಾತನಾಡಿ, ‘ರಾಮನಗರ ಕ್ಷೇತ್ರದಲ್ಲೂ ಕಾಂಗ್ರೆಸ್‌ ಅಭ್ಯರ್ಥಿಯಾದ ನನಗೆ ಮತನೀಡಿ ಬೆಂಬಲಿಸಬೇಕು’ ಎಂದು ಕೋರಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಕೆ.ನಾಗರಾಜು, ಮುಖಂಡರಾದ ಅಶೋಕ್‌, ಜಗದೀಶ್ವರಗೌಡ, ಹರೀಶ್‌ಗೌಡ, ಗುರುಪ್ರಸಾದ್‌, ಮೋಹನ್‌ಹೊಳ್ಳ, ಆಂಜನಪ್ಪ, ಎಚ್‌.ಸಿ.ಶೇಖರ್‌, ದಿನೇಶ್‌, ರಮೇಶ್‌, ಪರಮೇಶ್‌, ಶಿವಣ್ಣ, ಕೀಜರ್‌ಪಾಷ, ತಿಮ್ಮಮ್ಮ ವೆಂಕಟೇಶ್‌, ನಿಯಾಮತ್‌ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.