ಮಾಗಡಿ: ‘ಪಟ್ಟಣದ ಗೌರಮ್ಮನ ಕೆರೆ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು. ಪಟ್ಟಣದ ಗೌರಮ್ಮನಕೆರೆಗೆ ಭೇಟಿ ನೀಡಿ ವೀಕ್ಷಿಸಿ ಅವರು ಮಾತನಾಡಿದರು.
‘ಕಾಮಗಾರಿ ಆರಂಭಿಸಿದ ಮೇಲೆ ಮೊದಲ ಬಾರಿಗೆ ಕೆರೆ ತುಂಬಿದೆ, ಇಲ್ಲಿ ನೀರು ಖಾಲಿಯಾದ ಮೇಲೆ ಸಣ್ಣಪುಟ್ಟ ಲೋಪದೋಷಗಳನ್ನು ಸರಿ ಪಡಿಸಲಾಗುವುದು. ಸೋರಿಕೆ ಯಾಗುತ್ತಿರುವ ನೀರನ್ನು ನಿಲ್ಲಿಸುವಂತೆ ಅಧಿಕಾರಗಳಿಗೆ ತಿಳಿಸಿದ್ದೇನೆ’ ಎಂದು ಅವರು ಹೇಳಿದರು.
‘ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಭಿವೃದ್ದಿ ಬಗ್ಗೆ ತಿಳಿಸುತ್ತೇನೆ, ಕೆರೆಯ ಬಳಿ ವಾಕಿಂಗ್ ಪಾತ್ ನಿರ್ಮಿಸಿ ಕೆರೆ ಅಭಿವೃದ್ದಿ ಪಡಿಸಲಾಗುವುದು. ಕೆರೆಯ ಸುತ್ತಲಿನ ಸ್ವಚ್ಛತೆ ಕಾಪಾಡಿಕೊಂಡು ಕೆರೆ ರಕ್ಷಿಸಲು ಮುಂದಾಗಬೇಕು’ ಎಂದು ತಿಳಿಸಿದರು.
ತಹಶೀಲ್ದಾರ್ ಲಕ್ಷ್ಮೀಸಾಗರ್, ರಾಜಸ್ವ ನಿರೀಕ್ಷಕ ಗಂಗಮಾರೇಗೌಡ, ಗ್ರಾಮಲೆಕ್ಕಿಗ ವೆಂಕಟೇಶ್, ಸರ್ವೇಯರ್ ಪ್ರಭಾಕರ್, ಪುರಸಭೆ ಮುಖ್ಯಾಧಿಕಾರಿ ಶಿವಪ್ಪ, ಪುರಸಭೆ ಸದಸ್ಯ ಗುರು, ಮುಖಂಡರಾದ ಪುರುಷೋತ್ತಮ್, ಚಂದ್ರಶೇಖರ್ ಶೆಟ್ಟಿ, ಕೃಷ್ಣಕುಮಾರ್, ನರಸಿಂಹ ಡಿಂಗ್ರಿ, ಕಾರ್ತಿಕ್, ವರ್ತಕ ರಾಜೀವ ಶೆಟ್ಟಿ ಈ ಸಂದರ್ಭದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.