ADVERTISEMENT

ಕೆರೆ ಮಾಲಿನ್ಯ ಗಂಗಾಮಾತೆಗೆ ಅವಮಾನ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 9:39 IST
Last Updated 23 ಅಕ್ಟೋಬರ್ 2017, 9:39 IST
ಕೆಂಪಸಾಗರ ಗ್ರಾಮಸ್ಥರು ಭಾನುವಾರ ಕೆರೆ ಸ್ವಚ್ಛಗೊಳಿಸಿದರು
ಕೆಂಪಸಾಗರ ಗ್ರಾಮಸ್ಥರು ಭಾನುವಾರ ಕೆರೆ ಸ್ವಚ್ಛಗೊಳಿಸಿದರು   

ಮಾಗಡಿ: ಗ್ರಾಮೀಣ ಜನತೆ ಮತ್ತು ರೈತಾಪಿ ವರ್ಗದವರ ತಾಯಿಯಂತಿರುವ ಕೆರೆಗಳನ್ನು ಮಲಿನ ಮಾಡುವುದು ಗಂಗಾಮಾತೆಗೆ ಎಸಗಿದ ಅವಮಾನವಿದ್ದಂತೆ ಎಂದು ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎನ್‌.ಗಂಗರಾಜು ತಿಳಿಸಿದರು. ತಾಲ್ಲೂಕಿನ ಕೆಂಪಸಾಗರ ಕೆರೆಯಲ್ಲಿನ ಕಸವನ್ನು ಹೊರತೆಗೆದು ಸ್ವಚ್ಛತೆ ನಡೆಸಿ ಅವರು ಮಾತನಾಡಿದರು.

ಮುಮ್ಮಡಿ ಕೆಂಪೇಗೌಡ ಅವರ ತಾಯಿ ಕೆಂಪಮ್ಮ ಅವರ ಹೆಸರಿನಲ್ಲಿ ನಿರ್ಮಿಸಿರುವ ಚಾರಿತ್ರಿಕ ಕೆಂಪಸಾಗರ ಕೆರೆಯಲ್ಲಿ ಕಸ ತುಂಬಿ ನೀರು ಕಲುಷಿತವಾಗುತ್ತಿದೆ. ಕೆರೆ ಸಕಲ ಚರಾಚರ ಜೀವಿಜಂತುಗಳಿಗೆ ಆಶ್ರಯ ನೀಡಿ, ಜಲಮೂಲ ಮತ್ತು ಅಂತರ್ಜಲವನ್ನು ರಕ್ಷಿಸುತ್ತಿದೆ ಎಂದರು.

ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯಲ್ಲಿರುವ ಕಸವನ್ನು ತೆಗೆದು ಕೆರೆಯನ್ನು ಸ್ವಚ್ಛಗೊಳಿಸಬೇಕು. ಅಧಿಕಾರಿಗಳನ್ನೇ ಹೊಣೆ ಮಾಡುವುದು ಸರಿಯಲ್ಲ ಎಂದರು.

ADVERTISEMENT

ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕೆರೆಯ ಏರಿಯ ಎರಡು ಬದಿಗಳಲ್ಲಿ ಬೆಳೆದಿದ್ದ ಗಿಡಗಂಟಿ ಕಡಿದು ಹಾಕಲಾಗಿದೆ. ಅವುಗಳನ್ನು ತೆರವುಗೊಳಿಸದ ಕಾರಣ ಒಣಗಿದ ಗಿಡದ ಕಡ್ಡಿಗಳು ಕೆರೆಯ ನೀರಿಗೆ ಸೇರಿವೆ. ನೀರು ಸಂಪೂರ್ಣ ಕಲುಷಿತವಾಗುತ್ತಿದೆ ಎಂದು ಸಾತನೂರಿನ ಮುಖಂಡ ರಾಮಣ್ಣ ತಿಳಿಸಿದರು.

ಕೆಂಪಸಾಗರ ಕೆರೆಯಲ್ಲಿರುವ ಕಸವನ್ನು ತೆರವುಗಳಿಸ ಬೇಕೆಂದು ಹಾಲಶೆಟ್ಟಿ ಹಳ್ಳಿ ಗ್ರಾಮಸ್ಥರು ಮನವಿ ಮಾಡಿದರು. ಗ್ರಾಮಸ್ಥರು ಇದ್ದರು. ಉತ್ತಮ ಮಳೆಯಾದ ಕಾರಣ ಕೆರೆಯಲ್ಲಿ ಬಹಳಷ್ಟು ನೀರು ಸಂಗ್ರಹವಾಗಿದೆ. ಕೆಲವೇ ದಿನಗಳಲ್ಲಿ ಕೆರೆಯಲ್ಲಿರುವ ಕಸ ಕಡ್ಡಿಗಳನ್ನು ತೆರವುಗೊಳಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಜನಾರ್ದನ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.