ADVERTISEMENT

ಕೊಲೆ ಸಂಚುಕೋರರಿಗೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಕನಕಪುರ: ಕೊಲೆ ಪ್ರಯತ್ನದಂತಹ ಕೃತ್ಯಗಳನ್ನು ಖಂಡಿಸುವ ಬದಲು ಸಂಸದ ಎಚ್.ಡಿ.ಕುಮಾರಸ್ವಾಮಿಯಂಥವರು ಆರೋಪಿಗಳಿಗೆ ರಕ್ಷಣೆ ನೀಡಿ, ತಮ್ಮ ಕುಟುಂಬದ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆಂದು ಶಾಸಕ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಪಟ್ಟಣದ ಅರಳಾಳು ಗ್ರಾಮದಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ತುರ್ತು ಕಾರ್ಯಕರ್ತರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಕಾರ್ಯಕರ್ತರನ್ನು ಉದ್ದೆೀಶಿಸಿ ಮಾತನಾಡಿದರು.  ಕುಮಾರಸ್ವಾಮಿಯವರಿಗೆ ತಮ್ಮ ಕುಟುಂಬದ ವಿರುದ್ದ ಮೊದಲಿಂದಲೂ ಹಗೆತನ ಸಾಧಿಸುತ್ತಾ ಬಂದಿದ್ದಾರೆ.

ಈಗ ಸಹೋದರ ಸುರೇಶ್‌ನ ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದ ಆರೋಪಿ ಬಾಲನರಸಿಂಹೇಗೌಡನ ತಲೆ ಕಾಯಲು ಮುಂದಾಗಿ ಸುಳ್ಳು ಪ್ರಮಾಣ ಪತ್ರ ನೀಡುವ ಮೂಲಕ ಆಸ್ಪತ್ರೆಯಲ್ಲಿ ರಕ್ಷಣೆ ನೀಡುತ್ತಿದ್ದಾರೆಂದು ದೂರಿದರು. 
 
ಹತ್ತಾರು ಭಾರಿ ತಮ್ಮ ವಿರುದ್ದ ಹೋರಾಟ ನಡೆಸಿ ಸೋತಿರುವ ಅವರು ಇಂತಹ ಕೃತ್ಯಗಳ ಬೆಂಗಾವಲಾಗಿ ನಿಂತಿದ್ದಾರೆ. ಅವರು ಮುಖ್ಯ ಮಂತ್ರಿಯಾಗಿದ್ದಾಗ ನಮ್ಮ ಕುಟುಂಬ ಸದಸ್ಯರ ಮೇಲೆ ಪ್ರಕರಣ ದಾಖಲಿಸಿ ತೊಂದರೆ ನೀಡಿದ್ದರು, ಸಾತನೂರಿನಲ್ಲಿ ಸಾವಿರಾರು ಪೊಲೀಸರೊಂದಿಗೆ ಕಾರ್ಯಕ್ರಮ ನಡೆಸಿ ಕ್ಷಮೆಯಾಚಿಸಿದರು.ಅವರ ಎಲ್ಲಾ ಹೋರಾಟ ಮತ್ತು ಸವಾಲುಗಳನ್ನು ಎದುರಿಸಲು ತಾವು ಸಿದ್ದರಿರುವುದಾಗಿ ಹೇಳಿದರು.

ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ, ಕಾಂಗ್ರೆಸ್ ಮುಖಂಡರಾದ ಹೊನ್ನಿಗನಹಳ್ಳಿ ಶ್ರೀಕಂಠು, ಸೂರ‌್ನಳ್ಳಿ ಜಯರಾಮು ಮಾತನಾಡಿ, ರಾಜಕೀಯದಲ್ಲಿ ಏನೇ ಭಿನಾಭಿಪ್ರಾಯಗಳಿದ್ದರೂ ಮಾತಕತೆ ಮೂಲಕ ಬಗೆಹರಿಸಿಕೊಳ್ಳಬೇಕೆ ಹೊರತು, ಕೊಲೆಯಂತ ಕೆಟ್ಟ ಆಲೋಚನೆ ಮಾಡಬಾರದು. ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿಯಾವುಲಾ,್ಲ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ಮಂಜು,  ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.