ಮಾಗಡಿ: ತಾಲ್ಲೂಕಿನ ಮಣಿಗನಹಳ್ಳಿ ರಸ್ತೆಯ ಚೀಲೂರು ಬೆಟ್ಟದ ಬಳಿ ಗಂಧದ ಮರ ಕಡಿಯುತ್ತಿದ್ದ ಕಳ್ಳರ ತಂಡದ ಮೇಲೆ ದಾಳಿ ನಡೆಸಲಾಗಿದೆ ಎಂದು ಆರ್.ಎಫ್.ಓ. ಶಾಂತಕುಮಾರಸ್ವಾಮಿ ರವರು ತಿಳಿಸಿದ್ದಾರೆ.
ಚೀಲೂರು ಬೆಟ್ಟದ ಬಳಿ ಮರ ಕಡಿಯುತ್ತಿರುವ ಶಬ್ದವನ್ನು ಆಲಿಸಿದ ಅರಣ್ಯ ರಕ್ಷಕ ರಂಗಸ್ವಾಮಿ ತುರ್ತಾಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ ಆರ್.ಎಫ್.ಓ. ಶಾಂತಕುಮಾರಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ ಗಂಧದ ಮರ ಕಡಿಯುತ್ತಿದ್ದ ಕಾಡುಗಳ್ಳರು ಪರಾರಿಯಾಗಿದ್ದಾರೆ.
ಒಬ್ಬ ಮಹಿಳೆ ಮಾತ್ರ ಬಂಧಿಸಲ್ಪಟ್ಟಿದ್ದು ಆಕೆ ಹುಲಿಯೂರುದುರ್ಗ ನಿವಾಸಿ ಲಕ್ಷ್ಮಮ್ಮ ಎಂದು ತಿಳಿದುಬಂದಿದೆ. ಆಕೆಯ ಗಂಡ ದಾರುವಯ್ಯ ಮತ್ತು ಇತರ 9ಮಂದಿ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಅರಣ್ಯ ಸಿಬ್ಬಂದಿಯ ಮೇಲೆ ಕಳ್ಳರು ಆಯುಧಗಳಿಂದ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ.
ಗಂಧದ ಮರದ ತುಂಡುಗಳನ್ನು ಮತ್ತು ಅವುಗಳನ್ನು ಕಡಿಯಲು ಬಳಸಿದ್ದ ಮಚ್ಚು, ಹಾರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಾದ ಮಹಮ್ಮದ್ ಮನ್ಸೂರ್, ಕೆ.ಶಿವರಾಂ, ಮೂಡಲಗಿರಿಯಪ್ಪ ಹಾಗೂ ಉಮೇಶ್, ನಾಗರಾಜು, ಆಂಜಿನಪ್ಪ, ದೊಡ್ಡಯ್ಯ ಇತರೇ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.