ರಾಮನಗರ: ಇಂದಿನ ಗ್ರಾಮೀಣ ಹೃದಯಗಳು ಬರಡಾಗಿದ್ದು, ಬೌದ್ಧಿಕ ದಿವಾಳಿತನದಿಂದ ಸೊರಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ಎಂ.ಶಿವನಂಜಯ್ಯ ವಿಷಾದ ವ್ಯಕ್ತಪಡಿಸಿದರು.
ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ತೋಟಗಾರಿಕಾ ಸಂಘ ಜಂಟಿಯಾಗಿ ಕೆಂಗಲ್ ಬಳಿಯ ವಂದಾರಗುಪ್ಪೆಯಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯದ ದಿನವಾದ ಸೋಮವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದ ಹೂ, ಹಣ್ಣು, ತರಕಾರಿಗಳು ನಗರ ಪ್ರದೇಶಕ್ಕೆ ಸರಬರಾಜಾಗುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ರಾಸಾಯನಿಕ ಗೊಬ್ಬರವನ್ನು ಹಾಕಿ ಬೆಳೆದ ಹೂ, ಹಣ್ಣು, ತರಕಾರಿಗಳು ಗ್ರಾಮೀಣ ಪ್ರದೇಶಕ್ಕೆ ಸರಬರಾಜಾಗುತ್ತಿರುವುದು ಅತ್ಯಂತ ದು:ಖದ ಸಂಗತಿಯಾಗಿದೆ ಎಂದು ಬೇಸರ ಪಟ್ಟರು.
ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ ಮಾತನಾಡಿ, ಒಂದು ಕಾರ್ಖಾನೆಯು ತಾನು ಉತ್ಪಾದಿಸುವ ವಸ್ತುಗಳಿಗೆ ತಾನೇ ಬೆಲೆ ನಿಗದಿಪಡಿಸುವಂತೆ, ರೈತರು ಬೆಳೆದ ಬೆಳೆಗೆ ರೈತರೇ ಬೆಲೆ ನಿಗದಿಪಡಿಸುವಂತಾಗಬೇಕು. ಆಗ ಮಾತ್ರ ರೈತರ ಸಮಸ್ಯೆಗಳು ಬಗೆಹರಿದು, ರೈತರ ಏಳಿಗೆ ಸಾಧ್ಯವಾಗುತ್ತದೆ.
ಆಡಳಿತ ನಡೆಸುವವರ ನಿರ್ಲಕ್ಷ್ಯದಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ರೈತರಿಗೆ ನಿರಂತರ ವಿದ್ಯುತ್ ಕಲ್ಪಿಸಿಕೊಡಬೇಕು. ಯುವಜನಾಂಗವನ್ನು ಕೃಷಿಯ ಕ್ಷೇತ್ರಕ್ಕೆ ಆಕರ್ಷಿಸುವಂತೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಮಾದೇವಿ, ಸದಸ್ಯರಾದ ಎಲ್.ಧನಂಜಯ, ಎಚ್.ಎಲ್.ಚಂದ್ರು, ಸೌಭಾಗ್ಯಮ್ಮ, ಇಕ್ಬಾಲ್ ಹುಸೇನ್, ನಳಿನಾ, ಶಾಂತಮ್ಮ, ರಮೇಶ್, ವೆಂಕಟೇಶ್, ಎಚ್.ಸಿ.ರಾಜಣ್ಣ, ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು, ಕಾರಾಗೃಹ ಅಧೀಕ್ಷಕಿ ಆರ್.ಲತಾ, ಐಜೂರು ಠಾಣೆಯ ಸಬ್ಇನ್ಸ್ಪೆಕ್ಟರ್ ಶೋಭಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಬಿ.ಕೃಷ್ಣ, ಅಧಿಕಾರಿಗಳಾದ ರುದ್ರೇಶ್, ಗುಣವಂತ, ರಘು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.